Wednesday, December 31, 2008

ಕನ್ನಡ ಪ್ರೇಮಿ ಪೂಜಾಗಾಂಧಿ...


ಪರ ಭಾಷಾ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಪೂಜಾಗಾಂಧಿ ಈಗ ಕನ್ನಡಿಗರೇ ಆಗಿ ಹೋಗಿದ್ದಾರೆ. ಅಲ್ಪಾವಧಿಯಲ್ಲೇ ಕನ್ನಡ ಕಲಿಯುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಾವು ನಟಿಸಿರುವ 'ನಿನಗಾಗಿ ಕಾದಿರುವೆ' ಚಿತ್ರಕ್ಕೆ ಸ್ವತಃ ತಾವೇ ಡಬ್ ಮಾಡಿದ್ದಾರೆ.

ಈ ಚಿತ್ರವನ್ನು ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿರ್ದೇಶಿಸುತ್ತಿದ್ದಾರೆ. ಹಿಂದೆ ಇವರು 'ಯಾರೇ ನೀ ಯಾಮಿನಿ' ಚಿತ್ರಕ್ಕೆ ಮುಹೂರ್ತ ಮಾಡಿದ್ದರು. ಆದರೆ ಚಿತ್ರ ಒಂದು ವಾರದಲ್ಲಿ ಪ್ಯಾಕಪ್ ಆಯಿತು. ಈಗ 'ನಿನಗಾಗಿ...' ಚಿತ್ರವನ್ನು ಪೂರ್ಣಗೊಳಿಸಿ, ಚಿತ್ರದ ಧ್ವನಿಸುರುಳಿಯೂ ಬಿಡುಗಡೆಯಾಗಿದೆ.

ಪೂಜಾ ಅವರ ಕನ್ನಡದ ಮೇಲಿನ ಅಭಿಮಾನ ಕಂಡರೆ ಖುಷಿಯಾಗುತ್ತದೆ. ಇದೇ ಮೊದಲಾಗಿರುವುದರಿಂದ ಕೆಲವು ತಿದ್ದುಪಡಿ ಮಾಡಿಕೊಂಡು, ಕಷ್ಟಪಟ್ಟು ಮಾಡಿದ್ದಾರೆ. ಅದಕ್ಕಾಗಿ ಅವರ ಪಾತ್ರವನ್ನೇ ಹಾಗೆ ಬೆಸೆದಿದ್ದೇವೆ. ಚಿತ್ರದಲ್ಲಿ ಪೂಜಾ ದಿಲ್ಲಿಯಿಂದ ಬೆಂಗಳೂರಿಗೆ ಬಂದ ಹುಡುಗಿಯಾಗಿರುತ್ತಾಳೆ. ಆದ್ದರಿಂದ ಹರಕು ಮುರುಕಾಗಿ ಮಾತನಾಡಿದರೂ ಅಡ್ಡಿ ಇಲ್ಲ. ದಿಲ್ಲಿಯಿಂದ ಬಂದಿರುವ ಹುಡುಗಿಯಾದ್ದರಿಂದ ಹೀಗೆ ಮಾತನಾಡುತ್ತಾರೆ ಎಂದು ಜನ ಭಾವಿಸುತ್ತಾರೆ ಎಂದರು ನಿರ್ದೇಶಕರು.


(ಕರ್ಟೆಸೀ: ವೆಬ್ ದುನಿಯಾ)

Saturday, October 11, 2008

ಅಗ್ನಿ ಶ್ರೀಧರ್ ಬತ್ತಳಿಕೆಯಲ್ಲಿನ ಹೊಸ ಅಸ್ತ್ರ!

'ಆ ದಿನಗಳು' ಯಶಸ್ವಿಯ ನಂತರ 'ದಾದಾಗಿರಿಯ ದಿನಗಳ' ಜಾಡಿನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ 'ಸ್ಲಂ ಬಾಲ'. ಎರಡೇ ಎರಡು ಹಾಡುಗಳನ್ನು ಹೊಂದಿರುವ ಈ ಚಿತ್ರದ ಧ್ವನಿ ಸುರುಳಿ ಇತ್ತೀಚೆಗಷ್ಟೆ ಹೊಟೇಲ್ ಏಟ್ರಿಯಾದಲ್ಲಿ ಹಲವು ಚಿತ್ರೋದ್ಯಮದ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಪತ್ರಕರ್ತೆಯರಾದ ಸಂಯುಕ್ತ ಕರ್ನಾಟಕದ ಕೆ.ಎಚ್.ಸಾವಿತ್ರಿ ಹಾಗೂ ಸಿನಿಮಾ ಮಾಸಿಕ 'ಚಿತ್ರಾ'ದ ತುಂಗರೇಣುಕ ಮತ್ತು ಸರಸ್ವತಿ ಜಾಹಗೀರ್ ದಾರ್ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಸ್ಲಂ ಬಾಲನ ನಿರ್ದೇಶನದ ಜವಾಬ್ದಾರಿ ಹೊತ್ತಿರುವ 'ಅಗ್ನಿ' ವಾರಪತ್ರಿಕೆ ಪತ್ರಕರ್ತೆ ಡಿ.ಸುಮನಾ ಕಿತ್ತೂರು ಈ ಎರಡು ಹಾಡುಗಳನ್ನು ರಚಿಸಿದ್ದಾರೆ.

ಬರಹಗಾರ ಹಾಗೂ 'ಅಗ್ನಿ ' ವಾರಪತ್ರಿಕೆಯ ಸಂಪಾದಕ ಶ್ರೀಧರ್ ಮಾತನಾಡುತ್ತಾ, ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ, ಜವಾಬ್ದಾರಿಯುತವಾದ ಚಿತ್ರಗಳನ್ನು ನಿರ್ಮಿಸಬೇಕಾಗಿದೆ ಎಂದರು. ಸುಮನಾ ಕಿತ್ತೂರು ಅವರು ಈ ಚಿತ್ರವನ್ನು ಮಾಡಲು ಬಹಳಷ್ಟು ಹೆಣಗಿದ್ದಾರೆ. ಪ್ರತಿ ಫ್ರೇಂನಲ್ಲೂ ಅವರ ಪ್ರತಿಭೆ ಎದ್ದು ಕಾಣುತ್ತದೆ. ಸ್ಲಂ ಬಾಲನ ಪಾತ್ರದಲ್ಲಿ ಕಾಣಿಸುವ ವಿಜಯ್ ಸಹ ಈ ಪಾತ್ರಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ನನ್ನ ಪುಸ್ತಕದಲ್ಲಿನ ಮತ್ತೊಂದು ಪಾತ್ರವಾದ ರಜ್ಜುವಿನ ಪಾತ್ರ ನಿರೂಪಣೆ ಅದ್ಭುತವಾಗಿ ಮೂಡಿಬಂದಿದೆ ಎಂದು ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದರು.


ಇದೇ ಸಂದರ್ಭದಲ್ಲಿ ಶ್ರೀಧರ್ ಮತ್ತೊಂದು ವಿಷಯವನ್ನ್ನು ತಿಳಿಸಿದರು. ಮಲಯಾಳಂ ನಟ ಮೋಹನ್ ಲಾಲ್ ಅವರೊಂದಿಗೆ ಚಿತ್ರವನ್ನು ನಿರ್ದೇಶಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಮುಂದಿನ ವರ್ಷಮೋಹನ್ ಲಾಲ್ ಕಾಲ್ ಷೀಟ್ ಸಿಗುವ ಸಾಧ್ಯತೆಗಳಿವೆ.ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಇಟ್ಟುಕೊಂಡಿರುವ ಅಗ್ನಿ ಶ್ರೀಧರ್, ಮುಂದಿನ ದಿನಗಳಲ್ಲಿ ಅವುಗಳನ್ನು ಒಂದಾಗಿ ಪ್ರಯೋಗಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವ ದಿನಗಳು ದೂರವಿಲ್ಲ.


ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕವಿ ಸಿದ್ಧಲಿಂಗಯ್ಯ, ಇಂದುಧರ ಹೊನ್ನಾಪುರ, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಚ್.ಡಿ.ಗಂಗರಾಜು, ನಿರ್ಮಾಪಕ ಕನಕಪುರ ಶ್ರೀನಿವಾಸ್, ನಾಯಕ ನಟ ವಿಜಯ್ ಹಾಗೂ ನಾಯಕಿ ಶುಭಾ ಪುಂಜಾ ಉಪಸ್ಥಿತರಿದ್ದರು. ಇಂದುಧರ ಹೊನ್ನಾಪುರ ಮಾತನಾಡುತ್ತಾ, ಸ್ಲಂ ಬಾಲ ಎಲ್ಲ ಚಿತ್ರಗಳಂತಲ್ಲದ ಉತ್ತಮ ಗುಣಮಟ್ಟದಿಂದ ಕೂಡಿದ ಚಿತ್ರ ಎಂದರು. ಈ ರೀತಿಯ ಚಿತ್ರ ಕನ್ನಡದಲ್ಲಿ ಮಾತ್ರ ಮಾಡಲು ಸಾಧ್ಯ. ಜೀವನದ ಪ್ರತಿ ಹೆಜ್ಜೆಯಲ್ಲೂ ಭೂಗತ ಜಗತ್ತು ಹೇಗೆ ತನ್ನ ಕರಾಳ ಹಸ್ತಗಳನ್ನು ಚಾಚಿದೆ ಎಂಬುದು ಈ ಚಿತ್ರ ನೋಡಿದ ನಂತರ ತಿಳಿಯುತ್ತದೆ ಎಂದು 'ಸ್ಲಂ ಬಾಲ'ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
(ಕರ್ಟೆಸೀ: ದಟ್ಸ್ ಕನ್ನಡ)

Thursday, October 9, 2008

ಪೂಜಾಗಾಂಧಿ ಜನ್ಮ ದಿನೊತ್ಸವ

ಕನ್ನಡಕ್ಕೆ ಸಿಕ್ಕ ಕನ್ನಡವರೇ ಆದ ಕನ್ನಡೇತರ ನಟಿ ಪೂಜಾಗಾಂಧಿ! ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಹುಯ್ಯುವ ತನಕ ಅಪರಿಚರಾಗಿದ್ದು ನಂತರ ದಿಢೀರನೆ ಖ್ಯಾತಿಯ ಉತ್ತುಂಗ ಏರಿದ ಹುಡುಗಿ. ಮಿಲನದ ಮೂಲಕ ಮುಂಗಾರು ಮಳೆಯನ್ನು ಮರೆಸಿ ತಾಜ್ ಮಹಲ್ ಹಾಗೂ ಬುದ್ಧಿವಂತನ ಮೂಲಕ ಕನ್ನಡ ಚಿತ್ರರಸಿಕರನ್ನ್ನುಕಾಡುತ್ತಿರುವ ನಟಿ. ಇಂದು ಪೂಜಾಗಾಂಧಿಯ ಜನುಮದಿನ ಎಂದು ಹೇಳಲಷ್ಟೇ ಇಷ್ಟೆಲ್ಲಾ ಪೀಠಿಕೆ।

ಹೆಂಗಸರ ವಯಸ್ಸು, ಗಂಡಸರ ಸಂಬಳ ಕೇಳಬಾರದು ಎಂಬ ಗಾದೆಯೇ ಇರುವುದರಿಂದ ಪೂಜಾ ವಯಸ್ಸು ಇಲ್ಲಿ ಅಪ್ರಸ್ತುತ. ಪ್ರಸ್ತುತ ಪೂಜಾ 'ಗಾಂಧಿ'ನಗರದಲ್ಲಿ ಬ್ಯುಸಿಯಾಗಿರುವ ನಟಿ. ಜನುಮದ ಗೆಳತಿ, ಮಹರ್ಷಿ, ಅನು ಚಿತ್ರಗಳು ತೆರೆಕಾಣಬೇಕಾಗಿವೆ। ತಮಿಳಿನಲ್ಲಿ ಅರ್ಜುನ್ ಸರ್ಜಾ ಜತೆ ಒಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇಂದು ಅವರು ಬೆಂಗಳೂರಿನ ರಮಣಶ್ರೀ ಅಂಧರ ಶಾಲೆಯ ಮಕ್ಕಳ ಜೊತೆ ರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಕನ್ನಡಕ್ಕೆ ಬಂದು ಕನ್ನಡದವರೇ ಆದ ಬಹಳಷ್ಟು ನಟಿಯರು ಇದ್ದಾರೆ। ಅವರಲ್ಲಿ ಮುಖ್ಯವಾಗಿ ಲಕ್ಷ್ಮಿ, ಸರಿತಾ, ಮಾಧವಿ, ಗೀತಾ, ಸುಹಾಸಿನಿ, ಮಾಲಾಶ್ರೀ ಅವರ ಹೆಸರುಗಳನ್ನು ಪ್ರಸ್ತಾಪಿಸಬಹುದು. ಆದರೆ ಇತ್ತಿತ್ತಲಾಗಿ ಹಾಗೆ ಬಂದು ಹೀಗೆ ಹೋಗುವವರು ಹೆಚ್ಚಾಗುತ್ತಿದ್ದಾರೆ. ಆದರೆ ಪೂಜಾಗಾಂಧಿ ಮಾತ್ರ ಇದಕ್ಕೆ ಅಪವಾದ. ಕನ್ನಡ ಚಿತ್ರರಂಗಕ್ಕೆ ತಮ್ಮ ಪ್ರತಿಭೆ, ಸಾಧನೆಗಳನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ನಟಿ ಎನ್ನಬಹುದು. ಅವರು ಮುಂದೆಯೂ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಾ ಅವರ ಬಾಳ ಪಯಣ ಹೀಗೇ ಸಾಗಲಿ ಎಂದು ದಟ್ಸ್ ಕನ್ನಡ ಸಿನಿ ತಂಡ ಹಾರೈಸುತ್ತದೆ.
(ಕರ್ಟೆಸೀ: ವ್ಯಾನ್ ಇಂಡಿಯಾ)

Monday, October 6, 2008

ಮದಕರಿ ಸುದೀಪರ ಕಳ್ಳ ಪೊಲೀಸ್ ಆಟ


ಕಳ್ಳನಾಗಿ ಚಾಣಕ್ಷತನದಿಂದ ಟೆನ್ನಿಸ್‌ಕೃಷ್ಣರೊಂದಿಗೆ ಸೇರಿ ವಸ್ತುಗಳನ್ನು ಅಪಹರಿಸುವ ಮದಕರಿ ಒಂದೆಡೆಯಾದರೆ ಅಂಥಾ ಕಳ್ಳರನ್ನು ಮಟ್ಟಹಾಕುವ ವೀರಮದಕರಿಯೊಬ್ಬನಿದ್ದಾನೆ. ಆತ ನಿಷ್ಠಾವಂತ ಪೊಲೀಸ್ ಅಧಿಕಾರಿ.

ದುಷ್ಟರನ್ನು ಸದೆಬಡೆಯುವಲ್ಲಿ ಸದಾ ಮುಂದಿರುವ ಮದಕರಿ ಹೇಯ ಕೃತ್ಯಗಳಲ್ಲಿ ತೊಡಗಿದ್ದ ಖಳನಟ ಗೋಪಿನಾಥ್‌ಭಟ್ ಅವರನ್ನು ಥಳಿಸುತ್ತಾರೆ. ಇಬ್ಬರ ನಡುವೆ ನಡೆಯುವ ಈ ಬೀಕರ ಕಾಳಗದ ಕೆಲ ತುಣುಕುಗಳನ್ನು ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದೆ ಎಂದು ನಿರ್ಮಾಪಕ ದಿನೇಶ್‌ಗಾಂಧಿ ತಿಳಿಸಿದ್ದಾರೆ. ೩೫೦ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಾಹಸ ನಿರ್ದೇಶನ ನೀಡಿರುವ ಥ್ರಿಲ್ಲರ್‌ಮಂಜು ಈ ಸನ್ನಿವೇಶ ಅದ್ದೂರಿಯಾಗಿ ಮೂಡಿಬರುವಲ್ಲಿ ಅಪಾರ ಶ್ರಮವಹಿಸಿದ್ದಾರೆ.

ದಿನೇಶ್‌ಗಾಂಧಿ ನಿರ್ಮಿಸಿ, ಸುದೀಪ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ವಿಜೇಂದ್ರ ಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಕೆಂಪರಾಜ್ ಸಂಕಲನ, ದಿನೇಶ್‌ಮಂಗಳೂರ್ ಕಲೆ, ಕೆ.ವಿ.ಮಂಜಯ್ಯ ನಿರ್ಮಾಣನಿರ್ವಹಣೆ, ಶ್ರೀವೆಂಕಟ್ ಅವರ ಛಾಯಾಗ್ರಹಣವಿರುವ ಚಿತ್ರದಲ್ಲಿ ಸುದೀಪ್, ರಾಗಿಣಿ, ಪವಿತ್ರ, ದಿನೇಶ್‌ಗಾಂಧಿ, ದೇವರಾಜ್, ಗೋಪಿನಾಥ್‌ಭಟ್, ಮನೋಜ್, ದೊಡ್ಡಣ್ಣ ಟೆನ್ನಿಸ್‌ಕೃಷ್ಣ ಅಭಿನಯಿಸಿದ್ದಾರೆ.

Monday, September 29, 2008

ಗಾನಕೋಗಿಲೆ ಲತಾ ಮಂಗೇಶ್ಕರ್ ಜನ್ಮದಿನೋಸ್ತವ

ತಮ್ಮ ಅಪ್ರತಿಮ ಕಂಠದ ಮೂಲಕ ಆರು ದಶಕಗಳಿಂದ ಸಂಗೀತ ಪ್ರೇಮಿಗಳ ಮನಗೆಲ್ಲುತ್ತಿರುವ ಗಾನಕೋಗಿಲೆ ಲತಾ ಮಂಗೇಶ್ಕರ್ 80ನೇ ವರ್ಷಕ್ಕೆ ಅಡಿಯಿಟ್ಟರು। ಭಾನುವಾರ ಪುಣೆಯ ತಮ್ಮ ಮನೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಪುಣೆಯ ಬಾಲಗಂಗಾಧರ್ ರಂಗ ಮಂದಿರದಲ್ಲಿ ಲತಾ ಅವರ ಸಹೋದರ ಹೃದನಾಥ್ ಮಂಗೇಶ್ಕರ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ವಿಕ್ರಂ ಭಟ್ ರ ''1920'' ಎಂಬ ಬಾಲಿವುಡ್ ಚಿತ್ರದಲ್ಲಿ ಲತಾ ಅವರು ಪಂಡಿತ್ ಜಸ್ ರಾಜ್ ಹಾಗೂ ಆಶಾ ಬೋಂಸ್ಲೆ ಯೊಂದಿಗೆ ತೀರಾ ಇತ್ತೀಚೆಗಷ್ಟೆ ಹಾಡಿದ್ದರು। ತಮ್ಮ 75 ನೇ ಹುಟ್ಟುಹಬ್ಬವನ್ನು ಲತಾ ಮಂಗೇಶ್ಕರ್ ಮುಂಬೈನ ತಮ್ಮ ನಿವಾಸದಲ್ಲಿ ಆಚರಿಸಿಕೊಂಡಿದ್ದರು. ಆಗ ಅವರ ಹುಟ್ಟು ಹಬ್ಬದ ಸಮಾರಂಭಕ್ಕೆ ಶರದ್ ಪವಾರ್, ಎಲ್.ಕೆ.ಅಡ್ವಾಣಿ ಹಾಜರಾಗಿದ್ದರು. ಅವರು ತಮ್ಮ ಹುಟ್ಟುಹಬ್ಬವನ್ನು ಮುಂಬೈಯಲ್ಲಿ ಆಚರಿಸಿಕೊಂಡಿದ್ದೆ ವಿರಳ. ಅವರು ಯಾವತ್ತು ಪುಣೆ ಅಥವಾ ಕೊಲ್ಲಾಪುರದ ತಮ್ಮ ನಿವಾಸಗಳಲ್ಲಿ ಸರಳವಾಗಿ, ಖಾಸಗಿಯಾಗಿ ಹುಟ್ಟುಹಬ್ಬವನ್ನು ಆಚರಿಕೊಳ್ಳುತ್ತಿದ್ದರು.

ಖ್ಯಾತ ರಂಗಭೂಮಿ ಕಲಾವಿದ ದೀನಾನಾಥ್ ಮಂಗೇಶ್ಕರ್ ಪುತ್ರಿಯಾಗಿ ಲತಾ ಮಂಗೇಶ್ಕರ್ ಜನಿಸಿದ್ದು 1929ರಲ್ಲಿ। ತಂದೆ ಅಕಾಲಿಕ ಮರಣಕ್ಕೀಡಾದಾಗ 13ರ ಹರಯದಲ್ಲಿದ್ದ ಲತಾ ಅವರಿಗೆ ಸಂಸಾರದ ಹೊಣೆ ಹೆಗಲೇರಿತು. ಸಂಸಾರ ನೌಕೆಯನ್ನು ಸಾಗಿಸಲು ಮೊದಲು ಲತಾ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನು. ಹಾಗಾಗಿ ಅವರು ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ಹಾಡಲು ಅವಕಾಶಗಳು ದೊರೆತ ಬಳಿಕ ಗಾಯಕಿಯಾಗಿ ಬದಲಾದರು.

ಆರಂಭದಲ್ಲಿ ಲತಾ ಅವರಿಗೆ ನಟಿಯಾಗಿಯೇ ಮುಂದುವರಿಯುವ ಆಲೋಚನೆ ಇತ್ತು। 1947ರಲ್ಲಿ ಬಿಡುಗಡೆಯಾದ 'ಆಪ್ ಕಿ ಸೇವಾ ಮೆ' ಚಿತ್ರದಲ್ಲಿ ಹಾಡಲು ಮೊದಲ ಅವಕಾಶ ದೊರೆಯಿತು. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೆ ಇಲ್ಲ. ಹಲವಾರು ಭಾಷೆಗಳಲ್ಲಿ ಹಾಡಿರುವ ಲತಾ ಮಂಗೇಶ್ಕರ್ ಕನ್ನಡ ಚಿತ್ರ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತು ಎಂದು ಹಾಡಿದ್ದರು. ನಂತರ ಈ ಗಾನಕೋಗಿಲೆ ಕನ್ನಡಲ್ಲಿ ಹಾಡಲಿಲ್ಲ.

Thursday, September 25, 2008

ಡಾ.ರಾಜ್ ಸ್ಮಾರಕ ಅಭಿವೃದ್ಧಿಗೆ ಕಟ್ಟಾ ಭರವಸೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬುಧವಾರ ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಗಣ್ಯರಿಗೆ ಹಾಗೂ 2007ರಲ್ಲಿ ಬಿಡುಗಡೆಯಾದ ಯಶಸ್ವಿ ಚಿತ್ರಗಳ, ನಿರ್ಮಾಪಕರ, ನಿರ್ದೇಶಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿತು। ಅಭಿಮಾನಿ ಸಾಗರದ ನಡುವೆ ತಾರೆಗಳು ಬೆಳಗ್ಗೆ 10.30ಕ್ಕೆ ಸರಿಯಾಗಿ ಬಸವೇಶ್ವರ ನಗರದ ಅಭಿಮಾನಿ ಸಭಾಂಗಣದಲ್ಲಿ ಸಂಗಮವಾಗಿದ್ದರು.
ಈ ಅಪರೂಪದ ಕಲರ್ ಫುಲ್ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಸಾಕ್ಷಿಯಾಯಿತು। 70-80ರ ದಶಕದಲ್ಲಿ ಕನ್ನಡ ಬೆಳ್ಳಿತೆರೆಯನ್ನು ಬೆಳಗಿದ ಜಯಂತಿ, ಜಯಮಾಲ, ಭಾರತಿ ಸೇರಿದಂತೆ ಹಲವಾರು ಕಲಾವಿದರು ಕಾರ್ಯಕ್ರಮದ ಹೈಲೈಟ್ ಆಗಿದ್ದರು.

ಡಾ।ರಾಜ್ ಸ್ಮಾರಕ ಅಭಿವೃದ್ಧಿಗೆ ಕಟ್ಟಾ ಭರವಸೆ
ಕಾರ್ಯಕ್ರಮಕ್ಕೆ ಆಗಮಿಸಿದ್ದ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡುತ್ತಾ, ಕನ್ನಡ ಭಾಷೆ, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿರುವ ಚಿತ್ರರಂಗ ಶ್ರೇಯೋಭಿವೃದ್ಧಿಗೆ ಸರ್ಕಾರ ಮುಂದಾಗಲಿದೆ ಎಂದರು। ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಎಲ್ಲ ಕಲಾವಿದರಿಗೆ ನೆರವು ನೀಡಲು ಸಿದ್ಧವಿದೆ ಎಂದರು. ಚಿತ್ರರಂಗದ ಕಾರ್ಮಿಕ ವರ್ಗ ಕಷ್ಟಪಟ್ಟು ದುಡಿದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಅವರ ಭವಿಷ್ಯಕ್ಕಾಗಿ ವಾಣಿಜ್ಯ ಮಂಡಳಿ ಭವಿಷ್ಯ ನಿಧಿ ಸ್ಥಾಪಿಸಬೇಕು. ಸರ್ಕಾರ ಇದಕ್ಕೆ ಬೇಕಾದ ಅಗತ್ಯ ನೆರವನ್ನು ನೀಡಲಿದೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭರವಸೆ ನೀಡಿದರು. ಶೀಘ್ರದಲ್ಲೇ ಡಾ.ರಾಜ್ ಕುಮಾರ್ ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಹಿರಿಯ ಕಲಾವಿದೆ ಬಿ।ಸರೋಜಾದೇವಿ ಮಾತನಾಡುತ್ತಾ, ಕಲಾವಿದರೆಲ್ಲಾ ಒಗ್ಗಟ್ಟಾಗಬೇಕು. ಒಡಕುಗಳನ್ನು ಬಿಟ್ಟು ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಬೇಕು. ಡಾ.ರಾಜ್ ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಮಾಪಕಿ ಪಾರ್ವತಮ್ಮ ಮಾತನಾಡುತ್ತಾ, ಚಿತ್ರರಂಗದ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದು ವಾಣಿಜ್ಯ ಮಂಡಳಿ ಉತ್ತಮ ಕೆಲಸ ಮಾಡಿದೆ ಎಂದು ಕೊಂಡಾಡಿದರು. ಈ ಕಾರ್ಯಕ್ರಮದ ಸಂಪ್ರದಾಯ ಮುಂದೆಯೂ ನಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ತಾರೆ ಡಾ।ಬಿ.ಸರೋಜಾದೇವಿ, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಶ್ರೀನಾಥ್, ಹಿರಿಯ ಚಿತ್ರ ಕಲಾವಿದ ಡಾ.ಕೆ.ಎಸ್.ಅಶ್ವಥ್, ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್, ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟಿ ಉಮಾಶ್ರೀ, ಮಧು ಬಂಗಾರಪ್ಪ, ಟಿ.ಎಸ್.ನಾಗಾಭರಣ, ಶೈಲಜಾ ಶ್ರೀಕಾಂತ್, ಬಿ.ಎಸ್.ಲಿಂಗದೇವರು, ಧನರಾಜ್, 'ಕೋಟಿ ಚನ್ನಯ್ಯ' ಚಿತ್ರದ ನಿರ್ದೇಶಕ ಆನಂದ್ ಪಿ ರಾಜು ಅವರನ್ನು ಅಭಿನಂದಿಸಲಾಯಿತು.
(ದಟ್ಸ್ ಕನ್ನಡ )

Tuesday, September 23, 2008

ದುಬೈ ಬಾಬು (ಉಪೇಂದ್ರ) ಹಿರೋಯಿನ್ ನಿಕಿತ


ಉಪೇಂದ್ರ ಅಭಿನಯದ ಮುಂದಿನ ಚಿತ್ರದಲ್ಲಿ ದಕ್ಷಿಣ ಭಾರತದಲ್ಲಿ ಬೇಡಿಕೆ ನಟಿ ನಿಕಿತಾ ನಟಿಸಲಿದ್ದಾರೆ. ಚಿತ್ರಕ್ಕೆ 'ದುಬೈಬಾಬು' ಎಂದು ಹೆಸರಿಸಲಾಗಿದೆ. ತೆಲುಗಿನಲ್ಲಿ ರವಿತೇಜ ಹಾಗೂ ನಯನತಾರಾ ನಟಿಸಿದ್ದ ದುಬೈ ಸೀನು ಚಿತ್ರದ ಕನ್ನಡ ಅವತರಣಿಕೆ ಇದಾಗಲಿದೆ. ನಾಗಣ್ಣ, ಶೈಲೇಂದ್ರ ಬಾಬು ಹಾಗೂ ಉಪೇಂದ್ರ ತಂಡದಿಂದ ಮತ್ತೊಂದು ಎರವಲು ಸಂಸಾರಿಕ ಚಿತ್ರ ತಯಾರಿಯ ಹಂತದಲ್ಲಿದೆ.

ಈ ಚಿತ್ರದ ಮೂಲಕ ನಿರ್ಮಾಪಕ ಶೈಲೇಂದ್ರ ಬಾಬು, ನಿರ್ದೇಶಕ ನಾಗಣ್ಣ, ನಟ ಉಪೇಂದ್ರ ಅವರ ಯಶಸ್ವಿ ಜೋಡಿ ಮತ್ತೆ ಒಂದಾಗಿದೆ. ಕುಟುಂಬ, ಗೌರಮ್ಮ ಅಂತಹ ರಿಮೇಕ್ ಆದರೂ ಕೌಟುಂಬಿಕ ಚಿತ್ರ ಕೊಟ್ಟು ಜನ ಮನಗೆದ್ದ ಸಾಧನೆ ಇವರ ಪಾಲಿಗಿದೆ.ಈ ಚಿತ್ರಕ್ಕೆ ಶ್ರೀಧರ್ ಅವರ ಸಂಗೀತವಿದ್ದು, ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತೆ ಉಪೇಂದ್ರ ಅವರಿಗೆ ಸಾಹಸ ದೃಶ್ಯಗಳ ಅಭಿನಯ ಹೇಳಿಕೊಡಲಿದ್ದಾರೆ.

Thursday, September 18, 2008

ಗಿರೀಶ್ ಕಾಸರವಳ್ಳಿ "ಗುಲಾಬಿ ಟಾಕಿಸ್"



ಗಿರೀಶ್ ಕಾಸರವಳ್ಳಿ ಸಿನಿಮಾ ಅಂದರೆ ಅಲ್ಲಿ ಏನೋ ವಿಶೇಷ ಇರುತ್ತದೆ. ಅದು ಕಾದಂಬರಿ ಯೊಂದನ್ನು ಆಧರಿಸಿದ ಚಿತ್ರವಾದರೂ ಅಲ್ಲಿ ಕಾಸರವಳ್ಳಿ ಘಮಲು, ಕಲಾತ್ಮಕತೆಯ ಸೊಗಡು, ಮಣ್ಣಿನ ವಾಸನೆಯಿರುತ್ತದೆ. ಕೊನೆಗೊಂದು ಸಂದೇಶದ ಜತೆಗೆ ಬಿಡಿಸಲಾಗದ ಬದುಕಿನ ಸತ್ಯ ದರ್ಶನ. ಆ ಮೂಲಕ `ಇದಕ್ಕೆ ನೀವೇ ಉತ್ತರ ಕಂಡುಕೊಳ್ಳಿ' ಎಂದು ಪರೋಕ್ಷವಾಗಿ ಸಮಾಜಕ್ಕೆ ಸವಾಲು ಹಾಕುತ್ತಾರೆ ಕಾಸರವಳ್ಳಿ. ಅವರದೇ ಆದ ನಿರೂಪಣಾ ಶೈಲಿ, ನವಿರಾದ ಚಿತ್ರಕತೆ, ಸಹಜ ಸಂಭಾಷಣೆ ಕತೆಗೊಂದು ಸುವರ್ಣ ಚೌಕಟ್ಟು ಹಾಕುತ್ತದೆ.
ಹೊಸ ಪ್ರಯೋಗ ಗುಲಾಬಿ ಟಾಕೀಸು. ಇದು ಕತೆಗಾರ್ತಿ ವೈದೇಹಿಯವರ ಸಣ್ಣಕತೆಯ ಸಿನಿಮಾ ರೂಪಾಂತರ. ಆದರೆ ಆ ಕತೆಗೂ ಈ ಚಿತ್ರಕತೆಗೂ ಅಜಗಜಾಂತರ. ಮೂಲಕತೆಯ ಎಳೆ ಇಟ್ಟುಕೊಂಡು ಕಾಸರವಳ್ಳಿ ಅದಕ್ಕೆ ಪ್ರಸ್ತುತ ಜಗತ್ತಿನ ಆಗು ಹೋಗು ಮತ್ತು ಜಾಗತೀಕರಣದ ಲೇಪ ಹಚ್ಚುತ್ತಾರೆ. ಅದು ತನ್ನ ಸುಳಿಯಲ್ಲಿ ಮಾನವ ಸಂಕುಲವನ್ನು ಹೇಗೆ ಸೆಳೆಯುತ್ತಿದೆ, ನಗರೀಕರಣದ ಶಬ್ದ ಮಾಲಿನ್ಯ.
ರೂಪ ಪಡೆದು ನರನಾಡಿಗಳನ್ನು ಹೇಗೆ ನಾಟುತ್ತಿದೆ, ಒಂದೇ ಒಂದು ಟಿವಿ ಹೆಣ್ಣೊಬ್ಬಳ ಠೀವಿಯನ್ನೇ ಹೇಗೆ ಬದಲಿಸುತ್ತದೆ, ಬದುಕಿನ ದಿಕ್ಕನ್ನು ಹೇಗೆ ತಿರುಗಿಸುತ್ತದೆ, ಹಣದಾಹಿ ಗಂಡ ಮಾಡಿದ ತಪ್ಪಿಗೆ ಏನೂ ಅರಿಯದ, ತಪ್ಪು ಮಾಡದ ಹೆಂಡತಿ ಏಕೆ ಬಲಿಯಾದಳು, ಧರ್ಮ ಕರ್ಮಗಳು ಹೇಗೆ ರಕ್ತಸಂಬಂಧಕ್ಕೆ `ದಿಗ್ಬಂದನ' ಹಾಕುತ್ತವೆ ಎನ್ನುವ ಹಲವಾರು ಪ್ರಶ್ನಾರ್ಥಕ, ಉತ್ತರಾತೀತ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಗುಲಾಬಿ ಟಾಕೀಸು.
ಮೀನುಗಾರರ ಬದುಕು-ಬವಣೆ, ನಗರೀಕರಣ ದಿಂದಾಗುವ ದಿಢೀರ್ ಬದಲಾವಣೆ ಮುಂತಾದ ವಿಷಯಗಳು ಕೆಲವೇ ಗಂಟೆಯಲ್ಲಿ ಚರ್ಚೆಯಾಗುತ್ತವೆ. ಉಮಾಶ್ರೀ ಎನ್ನುವ ದೇಸಿ ಪ್ರತಿಭೆ ಬಗ್ಗೆ ಏನು ಹೇಳುವುದು? ಅವರು ಬರೀ ಅಭಿನಯಿಸಿಲ್ಲ, ಆ ಪಾತ್ರವೇ ತಾವಾಗಿದ್ದಾರೆ. ಗುಲಾಬಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಇಲ್ಲಿವರೆಗಿನ ಅವರದೇ ಪಾತ್ರಗಳನ್ನು ಮೀರಿಸಿದ್ದಾರೆ.
ಕುಂದಗನ್ನಡದ (ಕುಂದಾಪುರ ಸುತ್ತಮುತ್ತಲಿನ ಹಳ್ಳಿಗರ ಆಡುಭಾಷೆ)ಕಂಪು ಉದ್ದಕ್ಕೂ ಪಸರಿಸುತ್ತದೆ. ಇಲ್ಲಿಯ ವರೆಗೆ ಕಾಸರವಳ್ಳಿ ಸಿನಿಮಾ ಎಂದರೆ ಇಂದು ಒಂದು ವರ್ಗದ ಜನರಿಗೆ ಏನೋ ಒಂಥರಾಥರಾ. ಆದರೆ ಇಲ್ಲಿ ಅವೆಲ್ಲಕಿಂತ ವಿಭಿನ್ನ, ವಿಶೇಷವಾದ ಅಂಶ ಇದೆ ಎಂದೆನಿಸಿದರೆ ಅದಕ್ಕೆ ಉಮಾಶ್ರೀ ಯವರ ಲವಲವಿಕೆಯ ಅಭಿನಯ ಏಕೈಕ ಕಾರಣ. ಕೆ.ಜಿ. ಕೃಷ್ಣಮೂರ್ತಿ, ಎಂ.ಡಿ. ಪಲ್ಲವಿ ಮುಂತಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಮಚಂದ್ರ ಎಂದಿನಂತೆ ನಿಯತ್ತಾಗಿ, ಸಕತ್ತಾಗಿ ಕ್ಯಾಮರಾ ಹಿಡಿದಿದ್ದಾರೆ. ಅವರ ನೆರಳು ಬೆಳಕಿನ ಆಟವನ್ನು ನೋಡಿಯೇ ಸವಿಯಬೇಕು. ಛಾಯಾಗ್ರಹಣವೇ ಪಾತ್ರವಾಗುವುದೆಂದರೆ ಇದೇ ಇರಬೇಕು.
ಹಾಗಂತ ಇಲ್ಲಿ ಎಲ್ಲವೂ ಸರಿ ಇದೆ ಎಂದಲ್ಲ. ದ್ವಿತೀಯಾರ್ಧದ ಗಡಸು, ಮೊದಲಾರ್ಧಕ್ಕಿಲ್ಲ. ಹಾಗೇ ಯುದ್ಧದ ಪ್ರಸ್ತಾಪ ಗೊಂದಲ ಮೂಡಿಸುತ್ತದೆ. ಅದೇನೇ ಇದ್ದರೂ ಇದು ಕಾಸರವಳ್ಳಿ ಬತ್ತಳಿಕೆಯಲ್ಲಿದ್ದ ಒಂದು ಅಸ್ತ್ರ, ಮುಲಾಜಿಲ್ಲದೆ ಪ್ರಯೋಗ ಮಾಡಿದ್ದಾರೆ. ಅದು ನಾಟಲೇ ಬೇಕಾದ ಕೆಲವು ವರ್ಗದ ಜನರನ್ನಂತೂ ತಲುಪಿದೆ, ತಲುಪುತ್ತದೆ ಕೂಡ. ಅದನ್ನು ಕಾಸರವಳ್ಳಿ ಕರಾಮತ್ತು ಎಂದರೂ ತಪ್ಪಿಲ್ಲ. ಈ ಕರಾಮತ್ತನ್ನು ನೀವು ನೋಡಲೇಬೇಕು...
ಕರ್ಟೆಸಿ: ದಟ್ಸ್ ಕನ್ನಡ

Wednesday, September 10, 2008

ಪುನೀತ್ ವಿಗ್1 ಲಕ್ಷ

ಚಿತ್ರನಟರು ತಮ್ಮ ಕೇಶವಿನ್ಯಾಸವನ್ನು ಬದಲಾಯಿಸಿಕೊಳ್ಳಲು ವಿಗ್ ಬಳಸುವುದು ಸಾಮಾನ್ಯ ಸಂಗತಿ.ಬಕ್ಕತಲೆಯ ಕಲಾವಿದರು ಹಾಗೂ ನಾಯಕ ನಟರಿಗೆ ವಿಗ್ ಅನಿವಾರ್ಯ.
ತಲೆ ತುಂಬ ಕೂದಲಿರುವವರೂ ಚಿತ್ರವಿಚಿತ್ರ ಗೆಟಪ್ ಗಾಗಿ ವಿಗ್ ಬಳಸುವುದು ಈಗ ಮಾಮೂಲು.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ತಮ್ಮ ಹೊಸ ಚಿತ್ರ 'ರಾಜ್'ಗಾಗಿ ವಿಗ್ ಬಳಸುತ್ತಿದ್ದಾರೆ.
ಮುಂಬೈ ಕೇಶ ವಿನ್ಯಾಸಕರು ರೂಪಿಸಿರುವ ಈ ವಿಶೇಷ ವಿಗ್ ನ ಬೆಲೆ 1 ಲಕ್ಷ ರು. ಗಳು. ಇದಕ್ಕೂ ಮುನ್ನ ಅವರು 'ವೀರ ಕನ್ನಡಿಗ' ಚಿತ್ರದಲ್ಲಿ ವಿಗ್ ಉಪಯೋಗಿಸಿದ್ದರು. ಅದೊಂದು ತೆಲುಗು ಗೆಟಪ್ ವಿಗ್ ಆಗಿತ್ತು. ಆದರೆ ಈಗ ಬಳಸುತ್ತಿರುವ ವಿಗ್ ಯಾವ ಗೆಟಪ್ ದು ಎಂದು ಗೊತ್ತಾಗಿಲ್ಲ. ಮತ್ತೊಂದು ಮಾಹಿತಿಯ ಪ್ರಕಾರ, 'ರಾಜ್' ಚಿತ್ರದ ಕೆಲವೊಂದು ದೃಶ್ಯಗಳಿಗಷ್ಟೇ ಈ ವಿಶೇಷ ವಿಗ್ ಬಳಕೆಯಾಗುತ್ತಿದೆ. ಇನ್ನುಳಿದಂತೆ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಪುನೀತ್ ತಮ್ಮ ಅಸಲಿ ಕೇಶವನ್ನೇ ಪ್ರದರ್ಶಿಸಲಿದ್ದಾರೆ.ಈ ಬಗ್ಗೆ ಪುನೀತ್ ಮಾತನಾಡುತ್ತಾ, ಇದೊಂದು ವಿಶೇಷವಾಗಿ ವಿನ್ಯಾಸಗೊಳಿಸಿದ ವಿಗ್.
ಇದು ನನ್ನ ತಲೆಗೆ ಸರಿಯಾಗಿ ಹೊಂದಾಣಿಕೆಯಾಗಿದೆ. ಕೆಲವೊಂದು ದೃಶ್ಯಗಳಲ್ಲಿ ಮಾತ್ರ ಇದನ್ನು ಬಳಸುತ್ತಿದ್ದೇವೆ. ಉಳಿದಂತೆ ನಾನು ಸಹಜ ಗೆಟಪ್ ನಲ್ಲಿ ನಟಿಸಿದ್ದೇನೆ ಎಂದರು. ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಸೀತಿಭೈರವೇಶ್ವರ ಪ್ರೊಡಕ್ಷನ್ಸ್ ಬ್ಯಾನರಿನಡಿ ನಿರ್ಮಿಸಲಾಗುತ್ತಿದೆ. ಈ ಬಹುಕೋಟಿ ಚಿತ್ರವನ್ನು ಸುರೇಶ್ ಗೌಡ ಮತ್ತು ಶ್ರೀನಿವಾಸ್ ಮೂರ್ತಿ ನಿರ್ಮಿಸುತ್ತಿದ್ದಾರೆ. ಸಂಗೀತ ಸಂಯೋಜನೆ ವಿ.ಹರಿಕೃಷ್ಣ, ಛಾಯಾಗ್ರಹಣ ಎಸ್.ಕೃಷ್ಣ.

(ದಟ್ಸ್ ಕನ್ನಡ)

Tuesday, September 2, 2008

ಸ್ವರ್ಣಗೌರಿ ವ್ರತದ ಕಥೆ

ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ ಗೌರಿ ಹಬ್ಬ ಭಾದ್ರಪದ ಶುದ್ಧ ತದಿಗೆ ದಿನ ಬರುತ್ತದೆ. ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ.ಈ ಗೌರಿ ಹಬ್ಬವನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಯಲ್ಲಿ ಬಂತು ಎನ್ನುವ ಕುರಿತು ಸುಂದರವಾದ ಪೌರಾಣಿಕ ಕಥೆ ಚಾಲ್ತಿಯಲ್ಲಿದೆ.ಚಂದ್ರಪ್ರಭ ಎನ್ನುವ ಅರಸನು ಭೇಟೆಯಾಡಲು ಅರಣ್ಯಕ್ಕೆ ಹೋದಾಗ ಅಲ್ಲಿ ಒಂದು ಸುಂದರವಾದ ನೈಸರ್ಗಿಕ ಸಂಪತ್ತುಳ್ಳ ಸರೋವರದ ಬಳಿ ಅನೇಕ ಅಪ್ಸರೆಯರು ಸ್ವರ್ಣಗೌರಿ ಪೂಜೆಯನ್ನು ಮಾಡುವುದರಲ್ಲಿ ನಿರತರಾಗಿರುವುದನ್ನು ಕಾಣುತ್ತಾನೆ.ಪೂಜೆಯ ನಂತರ ಪೂಜೆಯ ಮಹತ್ವದ ಬಗ್ಗೆ ತಮಗೆ ತಿಳಿಸಬೇಕು ಎಂದು ಕೇಳುತ್ತಾನೆ. ಆ ಅಪ್ಸರೆಯರು ವ್ರತದ ಬಗ್ಗೆ ತಿಳಿಸುವರು. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಇದನ್ನು ಭಾದ್ರಪದ ಶುದ್ಧ ತದಿಗೆ ದಿನ ಆಚರಿಸಬೇಕೆಂದು ತಿಳಿಸಿ 16 ಗಂಟು ಹಾಕಿದ ದಾರವನ್ನು ಕೊಡುತ್ತಾರೆ.ರಾಜನು ಅರಮನೆಗೆ ಬಂದ ನಂತರ ತನ್ನ ಇಬ್ಬರು ಪತ್ನಿಯರಿಗೆ ಆ ದಾರವನ್ನು ಕೊಡಲು, ಮೊದಲನೆ ಪತ್ನಿ ಆ ದಾರವನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆದಳು. ಆ ಗಿಡವು ದಾರದ ಮಹಿಮೆಯಿಂದ ತಕ್ಷಣ ಚಿಗುರಿ ಬೆಳೆಯತೊಡಗಿತು. ಅದನ್ನು ಕಂಡ ಕಿರಿಯ ಪತ್ನಿಯು ಆ ದಾರವನ್ನು ಧರಿಸಿ ರಾಜನು ಹೇಳಿದ ಕ್ರಮದಲ್ಲಿ ಸ್ವರ್ಣಗೌರಿ ವ್ರತವನ್ನು ಆಚರಿಸಿದಳು.
ನಂತರ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿ ಸತಿಪತಿಯರು ಶಿವಲೋಕವನ್ನು ಹೊಂದಿ ಮುಕ್ತಿಯನ್ನು ಪಡೆದರೆಂಬ ಪ್ರತೀತಿ ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ. ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಗೌರವಪೂರ್ಣವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ.ಅಕ್ಕ ತಂಗಿಯರಿಗೆ ಸಹೋದರನು ಬಾಗಿನ ಕೊಡಬೇಕಾಗುತ್ತದೆ. ಈ ಬಾಗಿನವನ್ನು ಪಡೆಯುವುದರಿಂದ ಮುತ್ತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ. ಆದ್ದರಿಂದ ಸುಮಂಗಲಿಯರು ಗೌರಿಯನ್ನು ಪೂಜಿಸುವವರ ಮನೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.
ಮುತ್ತೈದೆಯರು ಸ್ವರ್ಣಗೌರಿ ವ್ರತವನ್ನು ನಿಷ್ಠೆಯಿಂದ ಆಚರಿಸಿದಲ್ಲಿ ಖಂಡಿತವಾಗಿ ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ವಿವಾಹಯೋಗ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ದೊರೆಯುತ್ತದೆ ಎನ್ನುವುದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ.ಈಗಿನ ಆಧುನಿಕ ಯುಗದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಗಳನ್ನು ವಿವಿಧ ರೂಪದಲ್ಲಿ ತಯಾರಿಸಿದರೂ ಬಣ್ಣ ರಹಿತವಾದ ಮೂರ್ತಿಗಳು ಪೂಜೆಗೆ ಶ್ರೇಷ್ಠ ಎನ್ನುವುದು ನಂಬಿಕೆ. ಸ್ವರ್ಣಗೌರಿ ಹಬ್ಬದ ದಿನ ಈ ಕೆಳಗಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಜಪಿಸಿದಲ್ಲಿ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.

"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ".

Tuesday, July 15, 2008

ದರ್ಶನ್, ನವ್ಯ ನಾಯರ್ ಈಗ "ಬಸ್"


'ಗಜ' ಮತ್ತು 'ಇಂದ್ರ' ಹಿಟ್ ಚಿತ್ರಗಳ ನಂತರ ದರ್ಶನ್‌ರ ಮತ್ತೆರಡು ಚಿತ್ರಗಳು ತೆರೆ ಕಾಣಲು ರೆಡಿಯಾಗಿವೆ। ಈ ವರ್ಷದ ಬಿಗ್ ಹಿಟ್ ಚಿತ್ರವೆಂದರೆ ಗಜ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಂದು ವಿಧದಲ್ಲಿ ಲಕ್ಕಿ ಚಿತ್ರವೂ ಹೌದು. ಚಿತ್ರದಲ್ಲಿನ ಕೆಲ ಹಾಡುಗಳು ಪಡ್ಡೆಗಳನ್ನು ಹುಚ್ಚೆದ್ದು ಕುಣಿಸಿವೆ.ನಂತರ ಬಂದ 'ಇಂದ್ರ' ಚಿತ್ರದ 'ಗುಂ ಗುಂ ಗುಂಮ್ತಾನೆ' ಹಾಡು ಸಾಕಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡಿತು.ಈ ಎರಡು ಯಶಸ್ವಿ ಚಿತ್ರಗಳ ನಂತರ ಆಗಸ್ಟ್ 15 ರಂದು 'ಅರ್ಜುನ' ಮತ್ತು ಸ್ವಂತ ಬ್ಯಾನರ್ ನಲ್ಲಿ ನಿರ್ಮಿಲಾಗಿರುವ 'ನವಗ್ರಹ' ಚಿತ್ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅನಂತರ 'ಬಾಸ್' ಎನ್ನುವ ಚಿತ್ರಕ್ಕೆ ಸಹಿ ಹಾಕಿರುವ ದರ್ಶನ್, ಗಜ ಚಿತ್ರದ ನಾಯಕಿ ನವ್ಯಾ ನಾಯರ್ 'ಬಾಸ್' ಚಿತ್ರಕ್ಕೂ ನಾಯಕಿಯಾಗಿ ಅಭಿನಯಿಸಲಿದ್ದಾರೆ. ರಮೇಶ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀರಾಜ್ ಎನ್ನುವ ಹೊಸಬರು ನಿರ್ದೇಶಕರು. 'ಅರ್ಜುನ' ಚಿತ್ರ ಈಗಾಗಲೇ ಆಸ್ಟ್ರೀಯಾ, ಜರ್ಮನಿ, ಬ್ಯಾಂಕಾಕ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ. ಇದು ಕಥೆಯ ತಿರುಳು. ಇದರಲ್ಲಿ ದರ್ಶನ್ ಅಭಿನಯ ಮನಮೋಹಕ ಎನ್ನುತ್ತಾರೆ ನಿರ್ಮಾಪಕರು. ಖಳನಾಯಕನ ಪಾತ್ರದಲ್ಲಿ ಶರತ್ ಲೋಹಿತಾಶ್ವ, ಅಜಯ್, ಸುಮನ್ ಮತ್ತು ಅಮಿತ್ ನಟಿಸಿದ್ದಾರೆ. ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಸ್ವಂತ ಬ್ಯಾನರ್ ತೂಗುದೀಪ ಪ್ರೊಡಕ್ಷನ್ ನಲ್ಲಿ ನಿರ್ಮಿಸುತ್ತಿರುವ 'ನವಗ್ರಹ' ಚಿತ್ರವನ್ನು ಸಹೋದರ ತೂಗುದೀಪ ದಿನಕರ್ ನಿರ್ದೇಶಿಸಲಿದ್ದಾರೆ. ಕನ್ನಡ ಚಿತ್ರರಂಗದ ಏಳು ಖಳನಟರ ಮಕ್ಕಳ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದರ್ಶನ್, ವಿನೋದ ಪ್ರಭಾಕರ್, ಗಿರಿ ದಿನೇಶ್, ಸೃಜನ್ ಲೋಕೇಶ್, ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ನಾಗೇಂದ್ರ ಅರಸ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಖಳನಟರ ಮಕ್ಕಳು ಒಟ್ಟಿಗೆ ನಟಿಸುವುದು ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಎಂದು ಹರ್ಷ ವ್ಯಕ್ತಪಡಿಸಿದರು. ಶರ್ಮಿಳಾ ಮಾಂಡ್ರೆ ಮತ್ತು ವರ್ಷಾ ಈ ಚಿತ್ರದ ನಾಯಕಿರು ಎಂದು ದರ್ಶನ್ ಹೇಳಿದರು. ಛಾಯಾಗ್ರಾಹಕರಾಗಿ ಎ.ವಿ.ಕೃಷ್ಣಕುಮಾರ್ ಮತ್ತು ವಿ.ಹರಿಕೃಷ್ಣ ಸಂಗೀತ ನಿರ್ದೇಶಕರಾಗಿದ್ದಾರೆ ಎಂದು ತಮ್ಮ ಚಿತ್ರದ ಬಗ್ಗೆ ವಿವರಿಸಿದರು.
(ಕರ್ಟೆಸಿ: ದಟ್ಸ್ ಕನ್ನಡ)

Friday, July 11, 2008

'ಸ್ಲಂ ಬಾಲ' ರೆಡಿ ಟು ರಿಲಿಜ್

ವಿಶೇಷ ಅಂಕಣಗಳನ್ನು ಬರೆದು ಓದುಗರಿಗೆ ಅಚ್ಚುಮೆಚ್ಚಾಗಿದ್ದ ಪತ್ರಕರ್ತೆ ಸುಮನ ಕಿತ್ತೂರ ನಿರ್ದೇಶನದ ಪ್ರಥಮ ಚಿತ್ರ 'ಸ್ಲಂಬಾಲ'। ಚಿತ್ರಕ್ಕೆ ನಿಗದಿತ ಯೋಜನೆಯಂತೆ ಚಿತ್ರೀಕರಣ ಪೂರ್ಣವಾಗಿದ್ದು ಆಕಾಶ್ ಸ್ಟೂಡಿಯೊದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಈ ಹಿಂದೆ 'ಆ ದಿನಗಳು' ಚಿತ್ರವನ್ನು ನಿರ್ಮಿಸಿದ್ದ, ಪ್ರಸ್ತುತ ಚಿತ್ರದ ನಿರ್ಮಾಪಕರಾದ ರವೀಂದ್ರ ಹಾಗೂ ಸೈಯ್ಯದ್ ಅಮಾನ್ ತಿಳಿಸಿದ್ದಾರೆ।ಬೆಂಗಳೂರು, ಮುಂಬೈ ಹಾಗೂ ಮುಂತಾದ ಕಡೆ ಚಿತ್ರೀಕರಣವಾದ ಈ ಚಿತ್ರವನ್ನು ಅಗ್ನಿಶ್ರೀಧರ್ ಅರ್ಪಿಸುತ್ತಿದ್ದಾರೆ। 'ಸ್ಲಂಬಾಲ'ನಿಗೆ ಕಥೆ, ಸಂಭಾಷಣೆ ಕೊಡುಗೆ ನೀಡಿರುವ ಅಗ್ನಿಶ್ರೀಧರ್ ನಿರ್ದೇಶಕರಿಗೆ ಚಿತ್ರಕಥೆ ರಚಿಸುವಲ್ಲೂ ನೆರವಾಗಿದ್ದಾರೆ। ಎ.ಸಿ.ಮಹೇಂದರ್ ಛಾಯಾಗ್ರಹಣ,ಅರ್ಜುನ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ದಿನೇಶ್ ಮಂಗ್ಳೂರ್ ಕಲೆ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯ್, ಶುಭಾಪುಂಜಾ, ಉಮಾಶ್ರೀ, ಗಿರಿಜಾಲೋಕೇಶ್, ಶಶಿಕುಮಾರ್, ಅಚ್ಯುತ, ಧರ್ಮ, ಬಿ.ಸುರೇಶ್, ಸತ್ಯ ಮುಂತಾದವರಿದ್ದಾರೆ.
(ಕರ್ಟೆಸಿ: ದಟ್ಸ್ ಕನ್ನಡ)

Wednesday, June 18, 2008

ರಮ್ಗೋಪಾಲ್ ವರ್ಮ ನ್ಯೂ ಹಿರೋಯಿನ್ ಅಮೃತಾ ಖಾನ್ವಿಲ್ಕರ್

ಬಾಲಿವುಡ್‌ನ ರಂಭೆ, ಮೇನಕೆ, ಊರ್ವಶಿಯರನ್ನು ಪರಿಚಯಿಸುವುದರಲ್ಲಿ ಬಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಎತ್ತಿದ್ದ ಕೈ. ಊರ್ಮಿಳಾ ಮಾತೊಂಡ್ಕರ್, ಅಂತರ ಮಾಲಿ, ನಿಶಾ ಕೊಠಾರಿ, ಜಿಯಾ ಖಾನ್‌ರ ಹೊಸ ಅನ್ವೇಷಣೆಗಳ ನಂತರ ವರ್ಮಾ ಮತ್ತೆ ಹುಡುಕಾಟದಲ್ಲಿ ನಿರತರಾದರು. ಆಡ್‌ಲ್ಯಾಬ್ಸ್‌ನ ಆಡಿಷನ್ ಗೆ ಬಂದಿದ್ದ ಅಮೃತಾ ಖಾನ್ವಿಲ್ಕರ್ ಎಂಬ ಬಳಕುವ ಬಳ್ಳಿ ಕಣ್ಣಿಗೆ ಬಿದ್ದು ಕಂಗಾಲಾದರು. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದರೆ ಇನ್ನೇನಾಗುತ್ತದೆ! ದೂರದರ್ಶನ ಜಾಹೀರಾತು ಹಾಗೂ ಸಿನಿಮಾ ಒಂದರಲ್ಲಿ ನಟಿಸಿದ ಅನುಭವವಿದೆ. ಜೊತೆಗೆ ಅಂದಚೆಂದವನ್ನು ಬೆರಳು ಮಾಡಿ ತೋರಿಸದಂತಹ ವೈಯಾರ. ವರ್ಮಾ ಸಿನಿಮಾಗೆ ಹೇಳಿ ಮಾಡಿಸಿದ ಅರ್ಹತೆ.ರಂಗೀಲಾ ಚಿತ್ರಕ್ಕಾಗಿ ಊರ್ಮಿಳಾರನ್ನು ಕರೆತಂದು ಕುಣಿಸಿದ್ದೇ ತಡ. ಊರ್ಮಿಳಾ ರಾತ್ರೋ ರಾತ್ರಿ ಪಡ್ಡೆಗಳ ಆರಾಧ್ಯ ದೈವವಾಗಿ ಬದಲಾದರು. ಹಾಗೆಯೇ ನಾಚ್ ಚಿತ್ರಕ್ಕಾಗಿ ಅಂತರಮಾಲಿ, ಜೇಮ್ಸ್ ಹಾಗೂ ಶಿವ ಚಿತ್ರಕ್ಕಾಗಿ ನಿಶಾ ಕೊಠಾರಿ, ನಿಶಬ್ದ್‌ನಲ್ಲಿ ನಟಿಸಿದ ಜಿಯಾಖಾನ್ ಯುವಕರ ಎದೆಬಡಿತವನ್ನು ಹೆಚ್ಚಿಸಿದರು. ವರ್ಮಾರ ವಿಭಿನ್ನ ಚಿತ್ರಕಥೆಗಳಿಗೆ ತಕ್ಕಂತೆ ಅಷ್ಟೇ ವಿಭಿನ್ನ ಬೆಡಗಿಯರು ಹಾಗೆ ಬಂದು ಹೀಗೆ ಮರೆಯಾದರು. ಈಗ ಅಮೃತಾ ಎಂಬ ಬಳುಕುವ ಬಳ್ಳಿ ವರ್ಮಾರ ಚಿತ್ರದಲ್ಲಿ ಅವಕಾಶಗಿಟ್ಟಿಸಿದ್ದಾರೆ.ವರ್ಮಾ ನಿರ್ದೇಶನದ, ಸುದೀಪ್ ನಾಯಕ ನಟನಾಗಿ ನಟಿಸುತ್ತಿರುವ 'ಫೂಂಕ್ ' ಹಾಗೂ 'ಕಾಂಟ್ರಾಕ್ಟ್' ಚಿತ್ರಗಳಲ್ಲಿ ಅಮೃತಾ ನಾಯಕಿಯಾಗಿ ಈಗಾಗಲೇ ಆಯ್ಕೆಯಾಗಿ ನಟಿಸುತ್ತಿದ್ದಾರೆ. ವರ್ಮಾ ನಿರ್ದೇಶನದ ಎರಡು ಚಿತ್ರಗಳು ಹಾಗೂ ಸೂರ್ಯ ನಿರ್ದೇಶನದ, ವರ್ಮಾ ನಿರ್ಮಾಣದ '340' ಎಂಬ ಚಿತ್ರದಲ್ಲಿ ನಟಿಸಲು ಅಮೃತಾ ಅಣಿಯಾಗಿದ್ದಾರೆ. ನಟಿಯಾಗಬೇಕು ಎಂದು ಕನಸು ಕಾಣುತ್ತಿದ್ದ ಈಕೆಗೆ 'ಮುಂಬೈ ಸಾಲ್ಸಾ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಅಲ್ಲಿಂದ ಮುಂದೆ ದಾರಿ ಕಾಣದೆ ಅಮೃತಾರ ಬದುಕು ಮೂರಾಬಟ್ಟೆಯಾಗಿತ್ತು. ಈಗ ವರ್ಮಾರ ಅವಕಾಶಗಳ ಮಹಾಪೂರವನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ.ಅಭಿನಯ ಹೇಗೋ ಏನೋ ಗೊತ್ತಿಲ್ಲ. ಆದರೆ ನೃತ್ಯದಲ್ಲಿ ಅನುಭವವಿದೆ. ಹಾಸ್ಯ, ಪ್ರೀತಿ, ಪ್ರೇಮ, ಪ್ರಣಯ... ಕಥೆಗಳ ಕಡೆಗೆ ಒಲವು. ರಿತೇಶ್ ದೇಶ್‌ಮುಖ್, ಜೂಹಿ ಚಾವ್ಲಾ ಈಕೆಯ ಇಷ್ಟದ ನಟ-ನಟಿಯರಂತೆ. ಎಂಥಾ ಪಾತ್ರವಾದರೂ ಸರಿ ಕರಣ್ ಜೋಹರ್ ಚಿತ್ರದಲ್ಲಿ ನಟಿಸಲು ಸಿದ್ಧವಿರುವುದಾಗಿ ಅಮೃತಾ ಜಂಭ ಕೊಚ್ಚಿಕೊಳ್ಳುತ್ತಾರೆ.
(ಕರ್ಟೆಸಿ: ದಟ್ಸ್‌ಕನ್ನಡ)

Monday, June 16, 2008

ಗೋಲ್ಡನ್ ಸ್ಟಾರ್ "ಗಾಳಿಪಟ" ಸಿಲ್ವರ್ ಜುಬ್ಲಿ

ಅಪಾರ ನಿರೀಕ್ಷೆಗಳ ಒತ್ತಡದೊಂದಿಗೆ ಭರ್ರನೆ ಮೇಲೆ ಹಾರಿ, ನಿರೀಕ್ಷೆಯ ಮಟ್ಟಕ್ಕೇರದೇ ಸಣ್ಣಗೆ ಗಿರಿಕಿ ಹೊಡೆದು, ಚಕ್ಕಾಚಿಕ್ಕಿಗೆ ಬೇರೆ ಯಾವುದೇ ಪ್ರತಿಸ್ಪರ್ಧಿಯಿಲ್ಲದೇ ಹಾಗೆಯೇ ಆಗಸದ ಮೇಲೇರಿದ 'ಗಾಳಿಪಟ' ಸೈಲೆಂಟಾಗಿ 25 ವಾರ ಓಡಿದ ಸಾಧನೆ ಮಾಡಿದೆ.ನಿರ್ದೇಶಕ ಯೋಗರಾಜ್ ಭಟ್ ಅವರ ಮಾಂತ್ರಿಕ ಸ್ಪರ್ಷ ಕಾಣದಿದ್ದರೂ ಆತ್ಮೀಯವಾದ ಕಥೆ, ಮನಬೆಚ್ಚಗೆ ಮಾಡುವ ಕಾಯ್ಕಿಣಿ ಹಾಡುಗಳು, ಗಣೇಶ್‌ರ ಅದೇ ನಗು ಚಿತ್ರವನ್ನು ಹಿಡಿದೆತ್ತಿದೆಯೆಂದರೆ ತಪ್ಪಾಗಲಾರದು. ಗಜ ಚಿತ್ರದ ನಂತರ ಈ ವರ್ಷದ ಎರಡನೇ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ.ಈ ಕಾರಣಕ್ಕಾಗಿಯೇ ಇತ್ತೀಚೆಗೆ ಪಿವಿಆರ್ ಚಿತ್ರಮಂದಿರದಲ್ಲಿ ಸಣ್ಣ ಸಂತೋಷಕೂಟವನ್ನು ಚಿತ್ರತಂಡ ಆಚರಿಸಿಕೊಂಡಿತು. ನಿರ್ದೇಶಕ ಯೋಗರಾಜ್ ಭಟ್, ಕಾರ್ಯನಿರ್ವಾಹಕ ನಿರ್ಮಾಪಕ ದಯಾಳ್, ನಾಯಕರಾದ ಗಣೇಶ್, ದಿಗಂತ್, ನಾಯಕಿಯರಾದ ಭಾವನಾ ರಾವ್ ಮತ್ತು ನೀತೂ ಸಂತೋಷಕೂಟದಲ್ಲಿ ಭಾಗವಹಿಸಿದ್ದರು. ದೊಡ್ಡದಾದ ಕೇಕ್ ಕಟ್ ಮಾಡಿ ಸಂತಸವನ್ನು ಚಿತ್ರತಂಡ ಹಂಚಿಕೊಂಡಿತು.

Saturday, June 14, 2008

ಸೆಕ್ಸ್ ವರ್ಕರ್ ಪಾತ್ರದಲ್ಲಿ ಐಶ್ವರ್ಯ ರೈಬಚ್ಚನ್


ತಮ್ಮನ್ನು ತಾವು ವಿಭಿನ್ನ ಪಾತ್ರಗಳಿಗೆ ತೊಡಗಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದರ ಕನಸು. ಆ ಕನಸು ಎಲ್ಲ ಕಲಾವಿದರಿಗೂ ಕೈಗೂಡುವುದಿಲ್ಲ.ಆದರೆ ಮಾಜಿ ವಿಶ್ವ ಸುಂದರಿ ಹಾಲಿ ಬಾಲಿವುಡ್ ಬಿನ್ನಾಣಗಿತ್ತಿ ಐಶ್ವರ್ಯ ರೈ ಬಚ್ಚನ್ ಮಾತ್ರ ಇದಕ್ಕೆ ಅಪವಾದ. ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಪ್ರೇಕ್ಷಕರ ಪಾಲಿಗೆ ಸದಾ ಕಾಡುವ ನಟಿ. ಪ್ರಸ್ತುತ ಐಶ್ವರ್ಯ ರೈ ಹಾಲಿವುಡ್ ಚಿತ್ರವೊಂದರಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಲಿದ್ದಾರೆ. 2001ರಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಪಡೆದ ಫ್ರೆಂಚ್ ರಿಮೇಕ್ ಚಿತ್ರ ಇದಾಗಲಿದೆ. ಐಶ್ವರ್ಯ ರೈ ಅವರೊಂದಿಗೆ ಸಹ ನಟಿಯಾಗಿ ಅಮೆರಿಕಾದ ಮೆರಿಲ್ ಸ್ಟ್ರೀಪ್ ನಟಿಸಲಿದ್ದಾರೆ. 'ಜೋಧಾ ಅಕ್ಬರ್' ಹಾಗೂ 'ಗುರು' ಚಿತ್ರಗಳ ಉತ್ತಮ ಅಭಿನಯದ ನಂತರಐಶ್ ನಟಿಸುತ್ತಿರುವ ಮತ್ತೊಂದು ವಿಭಿನ್ನ ಚಿತ್ರ ಇದಾಗಲಿದೆ.ಸದ್ಯಕ್ಕೆ ರೋಬೋಟ್ ಹಾಗೂ ಮಣಿರತ್ನಂ ಸರ್ ಅವರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ. ಹಾಲಿವುಡ್‌ನ ಈ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಬಿಗಿ ಒತ್ತಡದಲ್ಲಿ ನಟಿಸಬೇಕಾಗಿದೆ ಎನ್ನುತ್ತ್ತಾರೆ ಐಶ್. ಹಾಲಿವುಡ್‌ನ ಈ ಚಿತ್ರದಲ್ಲಿ ನಟಿಸಲು ಐಶ್‌ರನ್ನು ಕಾಡುತ್ತಿರುವುದು ಸಮಯ ಹೊಂದಾಣಿಕೆ. ಮಣಿರತ್ನಂರ ಹೊಸ ಚಿತ್ರದಲ್ಲಿ ನಟಿಸಲು ಆಕೆ ಸಜ್ಜಾಗುತ್ತಿದ್ದಾರೆ. ಸಮಯಾಭಾವದ ನಡುವೆ ಐಶ್ ಹಾಲಿವುಡ್ ಚಿತ್ರದಲ್ಲಿ ಹೇಗೆ ನಟಿಸುತ್ತಾರೆ ಎನ್ನುವುದೇ ಐಶ್ ಹಾಗೂ ಅವರ ಅಭಿಮಾನಿಗಳಿಗೆ ಕಾಡುತ್ತಿರುವ ಸಮಸ್ಯೆ.'ಬ್ರೈಡ್ ಅಂಡ್ ಪ್ರೆಜ್ಯೂಡೀಸ್', 'ದಿ ಮಿಸ್ಟ್ರೆಸ್ ಆಫ್ ಸ್ಪೈಸಸ್', 'ಪ್ರೊವೊಕ್ಡ್' ಹಾಗೂ 'ದ ಲಾಸ್ಟ್ ಲೆಜಿಯನ್ ' ಚಿತ್ರಗಳ ನಂತರ ಐಶ್ ನಟಿಸುತ್ತಿರುವ ಮತ್ತೊಂದು ಆಂಗ್ಲ ಚಿತ್ರ ಇದು. ಹರಾಲ್ಡ್ ನಿರ್ದೇಶನದ ಹಾಲಿವುಡ್‌ನ ಹಾಸ್ಯ ಪ್ರಧಾನ ಚಿತ್ರ 'ದಿ ಪಿಂಕ್ ಪಾಂಥರ್ ಡೀಕ್ಸ್' ತೆರೆ ಕಾಣಬೇಕಾಗಿದೆ. ಇದೆಲ್ಲದರ ನಡುವೆ ಹಾಲಿವುಡ್‌ನ ಇನ್ನೊಂದು ಚಿತ್ರಕ್ಕಾಗಿ ಅಮಿತಾಬ್ ಸೊಸೆ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ಐಶ್ ಬಾಲಿವುಡ್‌ನಿಂದ ಹಾಲಿವುಡ್‌ನತ್ತ ಮುಖ ಮಾಡಿ ಎತ್ತರೆತ್ತರಕ್ಕೆ ಏರುತ್ತಿದ್ದಾರೆ.
(ಕರ್ಟೆಸಿ: ದಟ್ಸ್ ಕನ್ನಡ)

Wednesday, June 11, 2008

"ಕೇರಾಫ್ ಪುಟ್ ಪಾತ್" ಚಿತ್ರಕ್ಕೆ ಸ್ವರ್ಣಕಮಲದ ಗರಿ

54ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕನ್ನಡದ ಮೂರು ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾದ್ದು ಉತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಮಾ.ಕಿಶನ್ ನಟಿಸಿ, ನಿರ್ದೇಶಿಸಿದ 'ಕೇರಾಫ್ ಪುಟ್ ಪಾತ್' ಚಿತ್ರಕ್ಕೆ ಸ್ವರ್ಣಕಮಲ, ಟಿ.ಎಸ್.ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಚಿತ್ರ ಅತ್ಯುತ್ತಮ ಭಾವೈಕ್ಯತೆ ಚಿತ್ರ ಹಾಗೂ ಬಿ.ಎಸ್.ಲಿಂಗದೇವರು ನಿರ್ದೇಶನದ 'ಕಾಡಬೆಳದಿಂಗಳು' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿದೆ.
ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಇದುವರೆಗೂ ಮೂರು ಸಲ ಭಾವೈಕ್ಯತೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕಲ್ಲರಳಿ ಹೂವಾಗಿ ಚಿತ್ರ ಉತ್ತಮ ಅಭಿರುಚಿಯ ಚಿತ್ರವಾಗಿದೆ. ಅಪಾ ಶ್ರದ್ಧೆಯಿಂದ ಈ ಚಿತ್ರವನ್ನು ತೆರಗೆ ತರಲಾಗಿತ್ತು. ನಮ್ಮ ಪರಿಶ್ರಮ ಗುರುತಿಸಿ ಪ್ರಶಸ್ತಿ ಘೋಷಿಸಿರುವುದು ಅತೀವ ಸಂತಸವಾಗಿದೆ ಎಂದು ಹೇಳಿದರು. ಕನ್ನಡ ಚಿತ್ರರಂಗಕ್ಕೆ ಉತ್ತಮವಾದ ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರ ನೀಡಬೇಕು ಎನ್ನುವ ಆಸೆ ಅನೇಕ ದಿನಗಳಿಂದ ಮನಸ್ಸಿನಲ್ಲಿತ್ತು. ಮಧು ಬಂಗಾರಪ್ಪ ಬಂಡವಾಳ ಹೂಡಲು ಮುಂದಾದಾಗ ಕಲ್ಲರಳಿ ಹೂವಾಗಿ ಚಿತ್ರ ಸಿದ್ಧವಾಯಿತು. ತುಂಬಾ ಅಚ್ಚುಕಚ್ಚಾಗಿ ತೆರೆಗೆ ತರಲಾಗಿತ್ತು. ಚಿತ್ರ ಅಷ್ಟೇನೂ ಯಶಸ್ಸು ಕಾಣದಿದ್ದರೂ, ಒಂದು ಉತ್ತಮ ಚಿತ್ರ ಮಾಡಿರುವ ನೆಮ್ಮದಿ ಇತ್ತು ಎಂದು ನಾಗಾಭರಣ ವಿಶ್ವಾಸದಿಂದ ಹೇಳಿದರು.
ಸ್ವರ್ಣಕಮಲ ಪ್ರಶಸ್ತಿಗೆ ಪಾತ್ರನಾಗಿರುವ ಬಾಲ ಪ್ರತಿಭೆ ಮಾ. ಕಿಶನ್ ಚಿಕ್ಕ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ್ದಾರೆ. 'ಕೇರಾಫ್ ಪುಟ್ ಪಾತ್' ಮಕ್ಕಳ ವಿಭಾಗದ ಅತ್ಯುತ್ತಮ ಚಿತ್ರಕ್ಕೆ ಆಯ್ಕೆಯಾಗುವ ಮೂಲಕ ಸ್ವರ್ಣಕಮಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ಕುರಿತು ಮಾತನಾಡಿದ ಕಿಶನ್, ನನಗೆ ತುಂಬಾ ಸಂತೋಷವಾಗಿದೆ. ಪ್ರಶಸ್ತಿಯನ್ನು ನಿರೀಕ್ಷಿರಲಿಲ್ಲ. ಅನಿರೀಕ್ಷಿತವಾಗಿ ಬಂದಿರುವ ಪ್ರಶಸ್ತಿಯಿಂದ ಇನ್ನೊಂದು ಚಿತ್ರ ನಿರ್ಮಿಸುವ ಕನಸಿನ ಮೊಳಕೆ ಒಡೆಯತೊಡಗಿದೆ ಎಂದು ಹೇಳಿದರು.
(ಕರ್ಟೆಸಿ: ದಟ್ಸ್ ಕನ್ನಡ)

Saturday, June 7, 2008

ಯೋಗರಾಜ ಭಟ್ಟರ ಜತೆ ಲಗೋರಿ ಆಡಲಿರುವ ಪುನೀತ್ ರಾಜ್ ಕುಮಾರ್

"ಮುಂಗಾರುಮಳೆಗೂ ಮುನ್ನ ಎರಡೂ ಮೂರು ಸ್ಕ್ರಿಪ್ಟ್ ಹಿಡಿದುಕೊಂಡು ವಜ್ರೇಶ್ವರಿ ಆಫೀಸ್, ಡಾ. ರಾಜ್ ಮನೆ ಕಡೆಗೆ ತಿರುಗಿದಷ್ಟೇ ಬಂತು. ಯಾವುದೂ ಗಿಟ್ಟಲಿಲ್ಲ. ಆದರೆ ಒಮ್ಮೆ ಅದೃಷ್ಟ ಖುಲಾಯಿಸಿದ ಮೇಲೆ ಎಲ್ಲರೂ ಕೇಳುವವರೇ" ಇದು ಕೀರ್ತಿ ಶಿಖರವೇರಿರುವ ಯೋಗರಾಜ ಭಟ್ಟರ ಹಣೆಬರಹ. ಎರಡು ಮೂರು ಚಿತ್ರ ಮಾಡಿ ವಿಮರ್ಶಕರಿಂದ ಸೈ ಎನಿಸಿಕೊಂಡರೂ ಪ್ರೇಕ್ಷಕರ ಮೆಚ್ಚುಗೆಯಿಂದ ದೂರಾಗಿದ್ದ ಭಟ್ಟರನ್ನು ಯಾರೂ ಪುರಸ್ಕರಿಸದ ಕಾಲವದು.ಆ ಕಾಲದಲ್ಲಿ ಪುನೀತ್ ಅವರನ್ನು ಹಾಕಿಕೊಂಡು ಚಿತ್ರ ಮಾಡಬೇಕು ಎಂದು ಆಸೆಪಟ್ಟು ಮುಂಗಾರು ಮಳೆ, ಗಾಳಿಪಟ ಎಂದೆಲ್ಲಾ ರಾಜ್ ಪರಿವಾರದವರ ಹತ್ತಿರಹೋದರೂ ಕೂಡ ಪ್ರಯೋಜನವಾಗಿರಲಿಲ್ಲ. ಆದರೂ ಗಣೇಶ್ ಅದೃಷ್ಟ, ಭಟ್ಟರ ತಂಡದ ಪರಿಶ್ರಮ ಬಿಗ್ ಬ್ಯಾನರ್ ನೆರವಿಲ್ಲದೆ ಯಶಸ್ವಿಯಾಗಿದ್ದು ಈಗ ಇತಿಹಾಸ.ಎಲ್ಲಕ್ಕೂ ಕಾಲ ಕೂಡಿ ಬರಬೇಕಲ್ಲ. ರಾಘಣ್ಣ ಭರವಸೆ ನೀಡಿದಂತೆ, ಇಂದು ಯೋಗರಾಜ್ ಭಟ್ಟರಿಗೆ ಪುನೀತ್ ರಾಜ್ ಅವರನ್ನು ನಿರ್ದೇಶಿಸುವ ಅವಕಾಶ ದೊರೆತಿದೆ. ಅಂತೂ ಇಂತೂ ಕಾಲ ಕೂಡಿ ಬಂತು ಎಂದು ಎಂದುಕೊಂಡ ಭಟ್ಟರಿಗೆ, ಸಾಥಿಯಾಗಿ ನಿಲ್ಲಲು ಕನ್ನಡದ ಮಟ್ಟಿಗೆ ಬಿಗ್ ಬ್ಯಾನರ್ ಎನ್ನಬಹುದಾದ ರಾಕ್ ಲೈನ್ ಪ್ರೊಡಕ್ಷನ್ ಮುಂದೆ ಬಂದಿದೆ.'ಲಗೋರಿ 'ಎಂಬ ಕ್ಯಾಚಿ ಹೆಸರನ್ನು ಆಗಲೇ ರಿಜಿಸ್ಟರ್ ಮಾಡಿದ್ದಾರೆ ರಾಕ್ ಲೈನ್ ವೆಂಕಟೇಶ್, ಭಟ್ಟರ ಚಿತ್ರದಲ್ಲಿ ಪುನೀತ್ ಕುಣಿಯುವುದಂತೂ ಖಚಿತವಾಗಿದೆ. ಮುಂಗಾರುಮಳೆ, ಗಾಳಿಪಟದಲ್ಲಿ ಕೈತಪ್ಪಿದ ಅವಕಾಶ ಪುನೀತ್ ಈಗ ಲಭಿಸಿದೆ. ಪ್ರತಿಭಾವಂತ ಪುನೀತ್, ಕ್ರಿಯೇಟಿವ್ ನಿರ್ದೇಶಕ ಯೋಗರಾಜ್ ಅವರ ಸಂಗಮದಿಂದ ಉತ್ತಮ ಚಿತ್ರ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ .ಏನಂತೀರಾ?
(ಕರ್ಟೆಸಿ: ದಟ್ಸ್ ಕನ್ನಡ)

Monday, May 26, 2008

ಜಗ್ಗೇಶ್, ಬಿ ಸಿ ಪಾಟೀಲ್ ವಿನ್.. ಅದರ್ಸ್ ಲಾಸ್ ...!?

ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಣ್ಣದ ಲೋಕದ ಥಳಕುಬಳುಕಿಗೆ ಮರುಳಾಗಿಲ್ಲ। ವರ್ಚಸ್ಸು, ಚರಿಷ್ಮಾ, ಸ್ಟಾರ್‌ಗಿರಿ, ನಾಟಕದ ಮಾತು, ತೋರಿಕೆಯ ಭರವಸೆಗಳನ್ನೆಲ್ಲ ಬದಿಗಿಟ್ಟು ಕಣಕ್ಕಿಳಿದಿದ್ದ ಸಿನೆಮಾ ತಾರೆಗಳನ್ನೆಲ್ಲ ನಿವಾಳಿಸಿ ಎಸೆದಿದ್ದಾರೆ, ಸೋಲಿನ ಮಳೆ ಸುರಿಸಿದ್ದಾರೆ।ಪ್ರಥಮ ಬಾರಿಗೆ ತೇರದಾಳದಿಂದ ಉಮಾಶ್ರೀ, ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದ ಅಂಬರೀಷ್ ಶ್ರೀರಂಗಪಟ್ಟಣದಿಂದ, ಬಂಡಾಯದ ಬಸಿ ಎಬ್ಬಿಸಿ ಟಿಕೀಟು ಗಿಟ್ಟಿಸಿಕೊಂಡಿದ್ದ ಜಗ್ಗೇಶ್ ತುರುವೇಕೆರೆಯಿಂದ, ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದ 'ಕೌರವ' ಬಿಸಿ ಪಾಟೀಲ್, ಅತ್ತ ಪೂರ್ಣ ಪ್ರಮಾಣದ ನಟನೂ ಆಗದ ರಾಜಕಾರಣಿಯೂ ಆಗದ ಸಿಪಿ ಯೋಗೇಶ್ವರ್ ಚನ್ನಪಟ್ಟಣದಿಂದ, ರಾಜಕಾರಣಿಯಾದಾಗಿನಿಂದ ಕ್ಷೇತ್ರದತ್ತ ತಲೆಯನ್ನೇ ಹಾಕದ ಶಶಿಕುಮಾರ್ ಚಳ್ಳಕೆರೆಯಿಂದ, ಸಿನೆಮಾರಂಗದಲ್ಲಿ ಕೆಲಸವಿಲ್ಲದೆ ರಿಟೈರಾಗಿದ್ದ ನಿರ್ದೇಶಕ ಮಹೇಂದರ್, ಮುಂಗಾರು ಮಳೆಯಿಂದ ಚಿತ್ರರಂಗಕ್ಕೆ ಗೆಲುವಿನ ಮಳೆ ಸುರಿಸಿದ್ದ ಇ। ಕೃಷ್ಣಪ್ಪ ಯಲಹಂಕದಿಂದ, ನಿರ್ಮಾಪಕ ಸಂದೇಶ ನಾಗರಾಜ್ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾಶ್ರೀ ಎಂಬ ನಟಿಯೊಬ್ಬರು ಈ ಬಾರಿ ವಿಧಾನಸೌಧ ಹತ್ತುವ ಉಮ್ಮೇದಿಯಿಂದ ಮತದಾರರತ್ತ ಕೈಯೊಡ್ಡಿದ್ದರು।ಇವರಲ್ಲಿ ತುರುವೇಕೆರೆಯಿಂದ ಜಗ್ಗೇಶ್ ಮತ್ತು ಹಿರೇಕೇರೂರಿನಿಂದ ಸ್ಪರ್ಧಿಸಿದ್ದ ಬಿಸಿ ಪಾಟೀಲ್ ಅವರಿಬ್ಬರನ್ನು ಬಿಟ್ಟು ಉಳಿದೆಲ್ಲರಿಗೂ ಜಾಣ ಮತದಾರರು ಕೈ ತೋರಿಸಿದ್ದಾರೆ। ರಂಗುರಂಗಿನ ಮಾತುಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ, ಚಿತ್ರರಂಗದ ಯಶಸ್ಸು ರಾಜಕೀಯ ದ್ವಾರ ಬಡಿಯಲು ಮಾನದಂಡವಲ್ಲವೆಂದು ಕ್ಷೇತ್ರಕ್ಕೇ ಬಾರದ ಶಾಸಕರಿಗೆ, ಮಾಜಿ ಸಂಸದರಿಗೆ, ಮಾಜಿ ನಟನಟಿಯರಿಗೆ ಮತದಾರರು ಬರೋಬ್ಬರಿ ಚಳ್ಳೆಹಣ್ಣು ತಿನ್ನಿಸಿದ್ದಾರೆ.ಟಿಕೆಟ್ ಸಿಗದೇ ಕಂಗಾಲಾಗಿ ಬಂಡಾಯದ ಬಾವುಟ ಹಾರಿಸಿದ್ದ ಜಗ್ಗೇಶ್ ಮಾತ್ರ ನಿರೀಕ್ಷಿತವೋ ಅನಿರೀಕ್ಷಿತವೋ ಅಂತೂ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಅಷ್ಟೋ ಇಷ್ಟೋ ಕೆಲಸ ಮಾಡಿದ್ದು ಅವರ ಸಹಾಯಕ್ಕೆ ಬಂದಿದೆ. ಚಿತ್ರರಂಗದಲ್ಲಿ ಕೆಲಸ ಕಡಿಮೆಯಿದ್ದಾಗ ಜನರ ಹಿತಕ್ಕಾಗಿಯೂ ಕೆಲಸ ಮಾಡಿದ್ದಕ್ಕೆ ಮತದಾರರು ಅವರ ಕೈಬಿಟ್ಟಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ರಚಿಸುವ ಯಾವ ಸಾಧ್ಯತೆಯೂ ಇಲ್ಲದ್ದರಿಂದ ಜನಸೇವೆಯನ್ನು ಸದ್ಯಕ್ಕೆ ಬದಿಗಿಟ್ಟು ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುತ್ತಾರೋ ನೋಡಬೇಕು. ಬಿಸಿ ಪಾಟೀಲ್ ಗೆಲ್ಲಿಸಿದ್ದಕ್ಕಾಗಿ ಮತದಾರರಿಗೆ ವಿಶೇಷ 'ಥ್ಯಾಂಕ್ಸ್' ಹೇಳಬೇಕು. ಚನ್ನಪಟ್ಟಣ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಸೈನಿಕ ಖ್ಯಾತಿಯ ಸಿ.ಪಿ. ಯೋಗೀಶ್ವರ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.ಆದರೆ ಇದೇ ಮಾತನ್ನು ಉಳಿದವರಿಗೆ ಹೇಳಲಾಗುವುದಿಲ್ಲ. ಸಂಸದರಾಗಿದ್ದಾಗ ಅಂಬರೀಷ್ ಕ್ಷೇತ್ರದ ಉದ್ಧಾರಕ್ಕಾಗಿ ಕೆಲಸ ಮಾಡಿದ್ದೂ ಅಷ್ಟಕ್ಕಷ್ಟೇ. ಮೊದಲ ಪಟ್ಟಿಯಲ್ಲಿ ಟಿಕೀಟು ಸಿಗದಿದ್ದರೂ ತಾರಾವರ್ಚಸ್ಸಿನಿಂದ ಟಿಕೀಟು ಗಿಟ್ಟಿಸಿದ್ದ ಅಂಬಿ ಈಗ ಶ್ರೀರಂಗಪಟ್ಟಣದಿಂದ ಕಂಬಿ ಕೀಳುವಂತೆ ಮಾಡಿದ್ದಾರೆ ಜನತೆ. ತಮಿಳುನಾಡು ಹೊಗೇನಕಲ್ ಯೋಜನೆಗೆ ಸಂಬಂಧಿಸಿದಂತೆ ಕ್ಯಾತೆ ತೆಗೆದಿದ್ದಾಗ ಜನರ ಕಷ್ಟಕ್ಕೆ ಧಾವಿಸದಿದ್ದುದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಅವರು ಇನ್ನೆಂದು ಮೇಲೇಳಲಿಕ್ಕಿಲ್ಲ.ಚಿತ್ರದಲ್ಲಿ ಮಾತಿನ ಮೋಡಿಯಿಂದ ಚಿತ್ರರಸಿಕರ ಮನಗೆದ್ದಿದ್ದ ಉಮಾಶ್ರೀ ಉತ್ತರ ಕರ್ನಾಟಕದ ಜನತೆಯ ಮತವನ್ನು ಗೆಲ್ಲಲು ಸೋತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ನಾಟಕಗಳನ್ನು ಪ್ರದರ್ಶಿಸಿ, ಅಲ್ಲಿನ ಭಾಷೆಯನ್ನು ಕರಗತ ಮಾಡಿಕೊಂಡಿದ್ದರೂ ಇದ್ಯಾವುದೂ ಅಲ್ಲಿ ಕೆಲಸಕ್ಕೆ ಬಂದಿಲ್ಲ. ಉಮಾಶ್ರೀಯಾಗಲಿ ಹೇಮಾಶ್ರೀಯಾಗಲಿ ಜಯಶ್ರೀ ಮುಡಿಗೇರಲು ಅನುಭವ, ವರ್ಚಸ್ಸು ಬೇಕೆಂದು ಮತದಾರ ಮನದಟ್ಟು ಮಾಡಿಕೊಟ್ಟಿದ್ದಾನೆ.ಬಾಗೇಪಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡೈಲಾಗ್ ಕಿಂಗ್ ಸಾಯಿಕುಮಾರ್ ಮಾತಾಡದಂತೆ ಮತದಾರರು ಮಾಡಿದ್ದಾರೆ. ಸಿನಿಮಾ ನಂಟು ಹೊಂದಿರುವ ಬಂಗಾರಪ್ಪನವರ ಪುತ್ರರಾದ ಕುಮಾರ್ ಹಾಗೂ ಮಧು ನೆಲಕಚ್ಚಿದ್ದಾರೆ. ಇನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೇಮಾಶ್ರೀ, ಸಂದೇಶ್ ನಾಗರಾಜ್, ಮಹೇಂದರ್ ಇವರಿಗೆ ಸ್ವಂತಃ ಗೆಲ್ಲುವ ಭರವಸೆಯಿರಲಿಲ್ಲ. ಮುಂಗಾರು ಮಳೆಯ ಯಶಸ್ಸನ್ನು ಕ್ಯಾಷ್ ಮಾಡೋಣವೆಂದು ಕಣಕ್ಕಿಳಿದಿದ್ದ ಇ.ಕೃಷ್ಣಪ್ಪಗೆ ಮಾತ್ರ ಸೋಲು ಅನಿರೀಕ್ಷಿತ.
(ಕರ್ಟೆಸಿ: ದಟ್ಸ್ ಕನ್ನಡ)

Thursday, May 22, 2008

ದೇವರಾಜ್ ಪೌರಾಣಿಕ ಡಿಜಿಟಲ್ ಚಿತ್ರ "ಪ್ರಚಂಡ ರಾವಣ"

ವಜ್ರಮುನಿ ಅವರಿಗೆ ಕೀರ್ತಿತಂದ'ರಾವಣ'ನ ಪಾತ್ರ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ। ಜನರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂಬ ನಂಬಿಕೆ ನನಗೆ ಇದೆ। ಚಿತ್ರ ಚೆನ್ನಾಗಿ ಬಂದಿದೆ ಎಂದು ಡೈನಾಮಿಕ್ ಹೀರೊ ದೇವರಾಜ್ ಸುದ್ದ್ದಿಗಾರರಿಗೆ ಹೇಳಿದರು। ಪ್ರಚಂಡ ರಾವಣ ಚಿತ್ರ ಈವಾರ ರಾಜ್ಯದಲ್ಲಿ ತೆರೆಕಾಣಲು ಸಿದ್ಧವಾಗಿದೆ।ಪೌರಾಣಿಕ ಚಿತ್ರಕ್ಕೆ ಡಿಜಿಟಲ್ ಸ್ಪರ್ಶನೀಡಲಾಗಿದೆ. ವಸ್ತ್ರವಿನ್ಯಾಸ, ಸೆಟ್ಟಿಂಗ್ ನಲ್ಲೂ ವಿಶೇಷ ಗಮನಹರಿಸಿ ಚಿತ್ರವನ್ನು ತೆಗೆದಿದ್ದೇವೆ. ಜನರಿಗೆ ಚಿತ್ರ ಮೆಚ್ಚುಗೆಯಾಗಲಿದೆ ಎಂಬ ಆಶಾವಾದವನ್ನು ನಿರ್ದೇಶಕ ಪ್ರಸಾದ್ ವ್ಯಕ್ತಪಡಿಸಿದರು. ನಟಿ ರಾಜೇಶ್ವರಿ, ನಿರ್ಮಾಪಕರಾದ ಲೋಕೇಶ್ ಹಾಗೂ ಗಿರೀಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.ನನ್ನ ಗುರು ಉದಯ್ ಕುಮಾರ್ ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಮಾಡಿದ ಆಂಜನೇಯನ ಪಾತ್ರವೇ ನನಗೆ ಸ್ಫೂರ್ತಿಎಂದ ಭರತ್ ಭಾಗವತರ್, ವಿಶೇಷವಾಗಿ ಮಕ್ಕಳಿಗೆ ಆಂಜನೇಯನ ಪಾತ್ರ ಇಷ್ಟವಾಗಲಿದೆ ಎಂದರು.ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರು ಸೃಷ್ಟಿಸಿದ "ಪ್ರಚಂಡರಾವಣ" ಕೃತಿ. ನಾಟಕ ರೂಪ ತಾಳಿ, ನಟ ವಜ್ರಮುನಿ ಅವರಿಗೆ ಅಪಾರ ಯಶಸ್ಸು, ಕೀರ್ತಿಯನ್ನು ತಂದುಕೊಟ್ಟಿತ್ತು.ಈಗಾಗಲೇ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಪಡೆದ ಈ ಅಮೋಘ ದೃಶ್ಯ ವೈಭವವನ್ನು ಪುನಃ ತೆರೆಗೆ ತರುವುದು ಸಾಹಸವೇ ಸೈ. ಬಹುಶಃ ವಜ್ರಮುನಿ ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ ನಾನು ಈ ಪಾತ್ರ ನಿರ್ವಹಿಸಲು ಹಿಂಜರಿಯುತ್ತಿದ್ದೆ. ಆದರೆ ಅಭಿಮಾನಿಗಳ ಆಯ್ಕೆ ನನ್ನ ಕಡೆಗೆ ಸೂಚಿತವಾದದ್ದು ನನ್ನ ಪುಣ್ಯ.(ಎಸ್ ಎಂಎಸ್ ಮೂಲಕ ರಾವಣ ಪಾತ್ರಧಾರಿಯ ಆಯ್ಕೆ ನಡೆದಿದ್ದು ವಿಶೇಷ) ನಿರ್ದೇಶಕ ಪ್ರಸಾದ್ ಹಾಗೂ ಪ್ರಚಂಡ ರಾವಣ ಚಿತ್ರ ತಂಡದ ನಿರಂತರ ಬೆಂಬಲದಿಂದ ನಾನು ಈ ಪಾತ್ರ ಮಾಡಲು ಸಾಧ್ಯವಾಯಿತು ಎಂದು ಪ್ರಾಂಜಲ ಮನಸ್ಸಿನಿಂದ ದೇವರಾಜ್ ಹೇಳಿದರು.

Monday, May 19, 2008

ಸಂಡಲ್ ವುಡ್ ನಲ್ಲಿ ಬಾಲಿವುಡ್‌ ಅತಿಥಿಗಳು...!?

ಬಾಲಿವುಡ್‌ ನಟರಾದ ನಾನಾ ಪಾಟೇಕರ್ ಅಥವಾ ಸುನಿಲ್ ಶೆಟ್ಟಿ ಇವರಿಬ್ಬರಲ್ಲಿ ಒಬ್ಬರು ಕನ್ನಡದ 'ನೀನೇ ಎಲ್ಲಾ' ಚಿತ್ರದಲ್ಲಿ ನಟಿಸಲಿದ್ದಾರೆ। ಐದು ನಿಮಿಷಗಳ ಕಾಲಾವಧಿಯ ಅತಿಥಿ ಪಾತ್ರದ ಕಾಣಿಸಲಿದ್ದಾರೆ। ಚಿತ್ರದಲ್ಲಿನ ಡಿಶುಂ ಡಿಶುಂ, ಹಾಡು ಅಥವಾ ಯಾವುದಾದರೂ ಒಂದು ಸನ್ನಿವೇಶದಲ್ಲಿ ಹಾಗೆ ಬಂದು ಹೀಗೆ ಹೋಗಲಿದ್ದಾರೆ.'ನೀನೇ ಎಲ್ಲಾ' ಚಿತ್ರದ ನಿರ್ದೇಶಕ ಸಚಿನ್ ಬಾಲಿವುಡ್‌ನಲ್ಲಿ ಲಾರೆನ್ಸ್ ಡಿಸೋಜಾ, ವಿಕ್ರಂ ಭಟ್, ಬಿ.ಆರ್.ಇಷಾರಾ, ದಿನೇಶ್ ದುಬೆ ಹಾಗೂ ಮಹಮದ್ ಆಲಿ ಸೇರಿದಂತೆ ಮುಂತಾದವರ ಬಳಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಹಾಗಾಗಿ ಬಾಲಿವುಡ್‌ನ ಖ್ಯಾತ ನಾಮರನ್ನು ಕನ್ನಡಕ್ಕೆ ಕರೆತರುವ ಇರಾದೆ ಸಹಜವಾಗಿ ಸಚಿನ್‌ ಅವರಿಗಿದೆ. ಬಾಲಾಜಿ ಟಿವಿ ತಂಡದಲ್ಲಿ ಮೂರು ವರ್ಷಗಳ ಕಾಲ ಚಿತ್ರಕಥೆಗಳ ಮೇಲ್ವಿಚಾರಕರಾಗಿ ಕೆಲಸ ಮಾಡಿದ ಅನುಭವ ಇದೆ. ಅನಿವಾಸಿ ಕನ್ನಡಿಗರಾದ ಜಾಯ್ ಮತ್ತು ರೋಹನ್ ಪ್ರದೀಪ್ 'ನೀನೆ ಎಲ್ಲಾ' ಚಿತ್ರಕ್ಕೆ ನಿರ್ಮಾಣದ ಜವಾಬ್ದಾರಿಯನ್ನು ಎಲ್ಲಾ ಅವರೇ ಹೊತ್ತಿದ್ದಾರೆ. ತಮ್ಮ ಗೆಳೆಯನೊಬ್ಬನ ನಿಜ ಜೀವನದ ಕಥೆಯನ್ನು ಆಧರಿಸಿ ನಿರ್ದೇಶಕ ಸಚಿನ್ ಚಿತ್ರಕಥೆ ರೂಪಿಸಿದ್ದರಂತೆ. ನೀನೇ ಎಲ್ಲಾ ಸಚಿನ್ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ. ಹಾಗೆಯೇ ಚಿತ್ರದ ಮುಖ್ಯ ಭೂಮಿಕೆಯಲ್ಲಿನ ಭರತ್ ಮತ್ತು ಅಮೃತಾ ಅವರಿಗೂ ಇದು ಮೊದಲ ಚಿತ್ರ.ನೀಲಾ ಅವರ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಗುರುಪ್ರಸಾದ್ ಛಾಯಾಗ್ರಹಣವಿದೆ. ರವೀಂದ್ರ ಹಾಗೂ ತಬಲಾ ನಾಣಿ ಸಂಭಾಷಣೆ ಇದೆ. ಚಿತ್ರೀಕರಣ ಜುಲೈ 15ರಿಂದ ಪ್ರಾರಂಭವಾಗಲಿದೆ. ಚಿತ್ರದ ಧ್ವನಿ ಸುರುಳಿ ಹಾಗೂ ಸಿಡಿಗಳು ಅಕ್ಟೋಬರ್ 20 ರಂದು ಬಿಡುಗಡೆ ಕಾಣಲಿವೆ. ನವಂಬರ್ 13 ರಂದು ಯುಕೆಯಲ್ಲಿ ವಿಶೇಷ ಪ್ರದರ್ಶನ ಕಂಡು ನವೆಂಬರ್ 21ರಂದು ಎಲ್ಲಾ ಕಡೆ ಚಿತ್ರ ಬಿಡುಗಡೆಯಾಗಲಿದೆ.
(ಕರ್ಟೆಸಿ: ದಟ್ಸ್‌ಕನ್ನಡ)

Wednesday, May 14, 2008

ಬೆಂಗಳೂರ್ ಸಿನಿಮಾನಲ್ಲಿ ಆಂದ್ರಿತಾ ರಾಯ್ ಪ್ರವೇಶ

ರೂಪದರ್ಶಿ ಕಮ್ ನಟಿಯಾದ ಈಕೆಗೆ ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ಸಾಲುಸಾಲಾಗಿ ಚಿತ್ರಗಳ ಆಫರ್ ಹುಡುಕಿಕೊಂಡು ಬಂದಿವೆ.ಬೆಂಗಳೂರು ಮೂಲದ ಈ ಹುಡುಗಿಗೆ ಹರಕು ಮುರುಕಿನ ಕನ್ನಡ ಮಾತಾಡಿ ಅಭ್ಯಾಸ ಇದೆ. ಕನ್ನಡಭಾಷೆ ಕಲಿಯುವ ಉತ್ಸಾಹವಿದೆ.ಪ್ರಜ್ವಲ್ ದೇವರಾಜ್ ಜತೆಗಿನ 'ಮೆರವಣಿಗೆ'ಚಿತ್ರಕ್ಕೆ ಆಯ್ಕೆಯಾದ ನಂತರ ಈಕೆಗೆ ಅದೃಷ್ಟ ಖುಲಾಯಿಸಿದೆ. ಸುಮಾರು ನಾಲ್ಕಾರು ಚಿತ್ರಗಳಿಗೆ ಬುಕ್ ಆಗಿದ್ದಾರೆ. ವಿಷ್ಯ ಅಂದ್ರೆ ಮೆರವಣಿಗೆ ಇನ್ನೂ ತೆರೆ ಕಂಡಿಲ್ಲ. ಮೇ ಅಂತ್ಯಕ್ಕೆ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ. ಪ್ರಜ್ವಲ್ ಜತೆಗೆ "ನನ್ನವನು' ಎಂಬ ಇನ್ನೊಂದು ಚಿತ್ರಕ್ಕೆ ಆಗಲೇ ಸಹಿ ಹಾಕಿರುವ ಆಂದ್ರಿತಾಗೆ ಇನ್ನೆರಡು ಚಿತ್ರಗಳು ಕಾದಿವೆ.ನೆನಪಿರಲಿ ಪ್ರೇಮ್ ನಾಯಕತ್ವದ 'ಜನುಮ ಜನುಮದಲ್ಲೋ' ಚಿತ್ರಕ್ಕೆ ಕೂಡ ಈಕೆಯೇ ನಾಯಕಿ, ಈ ಚಿತ್ರವನ್ನು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ಬ್ಯಾನರ್ ನಲ್ಲಿ ತಯಾರಾಗುತ್ತಿರುವ 'ವಾಯುಪುತ್ರ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜತೆಗೆ ನಟಿಸಲಿದ್ದಾರೆ. ಈ ಚಿತ್ರವನ್ನು ಕಿಶೋರ್ ಸರ್ಜಾ ನಿರ್ದೇಶಿಸಲಿದ್ದಾರೆ. ಈ ಚಿತ್ರ ತೆಲುಗಿಗೂ ಡಬ್ ಆಗುವ ಸಾಧ್ಯತೆಗಳಿವೆ. ಕನ್ನಡ ಚಿತ್ರಗಳ ಜತೆಗೆ ಈಕೆ ಚಂದ್ರ ಮಹೇಶ್ ನಿರ್ದೇಶನದ ತೆಲುಗು ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.ಪ್ರಜ್ವಲ್ ಅವರೊಡನೆ ಎರಡನೇ ಚಿತ್ರದಲ್ಲಿ ಕೆಲಸ ಮಾಡಲು ಖುಷಿಯಾಗುತ್ತದೆ.ನಾನು ಸ್ವಲ್ಪ ವಾಚಾಳಿ, ಪ್ರಜ್ವಲ್ ಕೂಡ ಮಾತಾಡುತ್ತಿದ್ದರೆ ಹೊತ್ತು ಹೋಗುವುದು ಗೊತ್ತಾಗುವುದಿಲ್ಲ. ಆದ್ರೆ ಕೆಲಸದ ವಿಷ್ಯದಲ್ಲಿ ತುಂಬಾ ಶ್ರದ್ಧೆವಹಿಸಿ ನಿರ್ದೇಶಕರ ಅಗತ್ಯಕ್ಕೆ ತಕ್ಕಂತೆ ನಟಿಸುತ್ತಿರುವೆ. ಮೆರವಣಿಗೆಯಲ್ಲಿ ನಗರ ಭಾಗಕ್ಕಿಂತ ಕಾಡುಮೇಡುಗಳಲ್ಲಿ ಚಿತ್ರೀಕರಣ ಹೆಚ್ಚಾಗಿತ್ತು. 'ನನ್ನವನು' ಚಿತ್ರ ಹೆಚ್ಚಾಗಿ ಬೆಂಗಳೂರಿನಲ್ಲಿ ನಡೆದಿದೆ. ಹಾಡುಗಳ ಶೂಟಿಂಗ್ ವಿದೇಶದಲ್ಲಿ ಆಗಬಹುದು. ಪ್ರಜ್ವಲ್ ಜೊತೆ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ನಿರೀಕ್ಷೆಯಿದೆ. ಕನ್ನಡ ಚಿತ್ರರಂಗದಲ್ಲಿ ಹೆಚ್ಚು ನಟಿಸುವ ಬಯಕೆಯಿದೆ ಎನ್ನುತ್ತಾರೆ 'ನನ್ನವನು' ಚಿತ್ರದಶೂಟಿಂಗ್ ನಲ್ಲಿದ್ದ ಆಂದ್ರಿತಾ .
(ಕರ್ಟೆಸಿ: ದಟ್ಸ್ ಕನ್ನಡ)

Tuesday, May 13, 2008

ರಾಜಕೀಯ ಕುರಿತ ವಿಷ್ಣು ವರ್ಧನ್ ಅಂತರಂಗ ಬಹಿರಂಗ

ರಾಹುಲ್‌ಗಾಂಧಿಯ ವ್ಯಕ್ತಿಗತ ವಿಚಾರಗಳು ನನಗೆ ಗೊತ್ತಿಲ್ಲ. ಆದರೆ ಆತ ಭ್ರಷ್ಟ ರಾಜಕಾರಣಿ ಆಗಲಾರ ಎಂಬ ಭರವಸೆ ನನ್ನಲ್ಲಿದೆ. ನಮ್ಮ ದೇಶಕ್ಕೆ ಇಂತಹ ಯುವ ನಾಯಕರು ಬೇಕು. ಹಾಗೆಯೇ ಕೃಷ್ಣಭೈರೇಗೌಡ. ಅವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಒಳ್ಳೆಯ ವಿದ್ಯಾವಂತ. ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಅಂತಲೇ ಅಲ್ಲ ಇಂತಹ ಯುವ ನಾಯಕರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಇವರೆಲ್ಲಾ ಭ್ರಷ್ಟರಾಗದೆ ಉನ್ನತ ಮೌಲ್ಯಗಳನ್ನು ಇಟ್ಟುಕೊಂಡು ಮುಂದುವರಿಯಬೇಕು ಎನ್ನುತ್ತಾರೆ ನಟ ವಿಷ್ಣುವರ್ಧನ್.ಸಾಹಸಸಿಂಹ ವಿಷ್ಣು ವರ್ಧನ್ ದೈಹಿಕ ಹಾಗೂ ಮಾನಸಿಕವಾಗಿ ಮಾಗಿದ್ದಾರೆ. ರಾಜಕೀಯ ಕುರಿತ ಇತ್ತೀಚೆಗಿನ ಅವರ ಒಲವು ನಿಲುವು ನೋಡಿದರೆ, ಮುಂದೊಂದು ದಿನ ಅವರು ರಾಜಕೀಯ ರಂಗ ಪ್ರವೇಶಿಸುವುದು ಖಚಿತ ಎನಿಸುತ್ತದೆ. ಈ ಹಿಂದೆ ಅಂಬರೀಷ್ ಪರವಾಗಿ ವಿಷ್ಣು ಹಲವಾರು ಬಾರಿ ಪ್ರಚಾರ ಭಾಷಣ ಮಾಡಿದ್ದರು. ಈ ಬಾರಿ ಚುನಾವಣೆಗೆ ಶ್ರೀರಂಗಪಟ್ಟಣದಲ್ಲಿ ಅಂಬಿ ಕಣಕ್ಕಿಳಿದಿದ್ದಾರೆ. ಆದರೆ ಯಾಕೋ ಏನೋ ಈ ಸಲ ಅಂಬಿ ಪರ ಅಷ್ಟಾಗಿ ಪ್ರಚಾರಕ್ಕಿಳಿಯದೆ ಮಗುಮ್ಮಾಗಿ ಇದ್ದು ಬಿಟ್ಟರು ವಿಷ್ಣು.ನನ್ನ ಗೆಳೆಯ ಅಂಬಿ ಈಗಾಗಲೇ ಸಾಕಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾನೆ. ಆದರೆ ಅವನು ಇನ್ನು ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅವನಲ್ಲಿ ನಾನು ಏನೇನೋ ಕನಸು ಕಂಡಿದ್ದೀನಿ. ಅವನ್ನೆಲ್ಲಾ ನನಸು ಮಾಡುತ್ತಾನೆ ಎಂಬ ನಂಬಿಕೆ ನನಗಿದೆ. ಶ್ರೀರಂಗಪಟ್ಟಣದಲ್ಲಿ ಅಂಬಿ ಗೆದ್ದೇ ಗೆಲ್ಲುತ್ತ್ತಾನೆ. ಪ್ರಜೆಗಳ ನೋವಿಗೆ ಸ್ಪಂದಿಸಿದರೆ ಖಂಡಿತ ಆತ ಅದ್ಭುತಗಳನ್ನು ಸೃಷ್ಟಿಸಬಹುದು ಎಂದು ವಿಷ್ಣು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.ನನಗೆ ರಾಜಕೀಯ ಪ್ರವೇಶಿಸುವುದು ಇಷ್ಟವಿಲ್ಲ. ಹಾಗೆಂದು ರಾಜ್ಯದ ಬಗ್ಗೆ ರಾಜ್ಯದ ಉದ್ಧಾರದ ಕುರಿತು ನನಗೆ ಕಾಳಜಿ ಇಲ್ಲ ಎಂದಲ್ಲ. ಶಾಂತಿ ನೆಮ್ಮದಿಗೆ ಹೆಸರಾದ ಕರ್ನಾಟಕ ಒಂದು ಮಾದರಿ ರಾಜ್ಯವಾಗಬೇಕು. ಜನ ನೆಮ್ಮದಿಯಿಂದ ಬದುಕು ನಡೆಸಬೇಕು ಎಂಬ ಕನಸು ನನಗಿದೆ. ಈ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುವ ಕಾಲ ಬಂದರೆ ಖಂಡಿತ ರಾಜಕೀಯಕ್ಕೆ ಧುಮುಕುತ್ತೇನೆ. ಭ್ರಷ್ಟ, ಸುಳ್ಳು-ವಂಚನೆಯ ರಾಜಕೀಯದಲ್ಲಿ ನನಗೆ ನಂಬಿಕೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ರಾಜಕೀಯಕ್ಕೆ ಬಂದು ನನ್ನ ಮೌಲ್ಯಗಳನ್ನು ಊದಿದರೆ, ಅದು ಅರಣ್ಯ ರೋದನ ಅಷ್ಟೆ ಎನ್ನುತ್ತಾರೆ ವಿಷ್ಣು.ದೇಶವನ್ನು ಉದ್ಧಾರ ಮಾಡಬೇಕಾದರೆ ರಾಜಕೀಯಕ್ಕೆ ಪ್ರವೇಶಿಸಬೇಕೆಂದೇನು ಇಲ್ಲ. ರಾಜಕೀಯದಿಂದ ದೂರವಿದ್ದೂ ಸಮಾಜದಲ್ಲಿ ಕ್ರಾಂತಿ ತರಬಹುದು. ಭ್ರಷ್ಟ ರಾಜಕಾರಣ ಇಲ್ಲದ ಭಾರತವನ್ನು ನೋಡಬೇಕು. ತಾನೊಬ್ಬ ಪ್ರಜಾಸೇವಕ ಎಂಬ ಪ್ರಮಾಣಿಕ ಕಳಕಳಿ ರಾಜಕಾರಣಿಗಳಿಗೆ ಬರಬೇಕು. ಪ್ರತಿಯೊಬ್ಬ ಪ್ರಜೆಯು ಈ ಮಣ್ಣಿನ ಋಣ ತೀರಿಸಬೇಕು. ಆಗಷ್ಟೇ ಇಡೀ ವಿಶ್ವ ನಮ್ಮ ದೇಶ, ರಾಜ್ಯದ ಕಡೆ ನೋಡುವಂತಾಗುತ್ತದೆ. ಹೀಗೆ ವಿಷ್ಣು ತಮ್ಮ ಅಂತರಂಗದಲ್ಲಿನ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
(ಕರ್ಟೆಸಿ: ದಟ್ಸ್‌ಕನ್ನಡ)

Friday, May 9, 2008

ಕನ್ನಡದಲ್ಲಿ ಅನಿಮೇಷನ್ ಘಟೋತ್ಕಚ

'ಮಾಯಾಬಜಾರ್‌'ನ ಒಂದು ಪ್ರಸಿದ್ಧ ಪಾತ್ರ ಘಟೋತ್ಕಚ. ಅವನ ಪಂಚಭಕ್ಷ್ಯಪರಮಾನ್ನಗಳನ್ನು ಕುರಿತು ಹೇಳುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ. ಈಗ ಘಟೋತ್ಕಚನನ್ನು ಕಣ್ಣರಳಿಸಿ ನೋಡಲು ಚಿತ್ರಮಂದಿರಗಳಿಗೆ ಲಗ್ಗೆ ಹಾಕಬೇಕಾಗಿದೆ. ಕಂಪ್ಯೂಟರ್ ಅನಿಮೇಷನಲ್ಲಿ ಆ ಪಾತ್ರ ಈಗ ಬೆಳ್ಳಿ ಪರದೆಗೆ ಅಡಿ ಇಡಲಿದೆ. ಸೂರ್ಯದೇವರ ವಿನೋದ್ ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ತೆಲುಗು,ತಮಿಳು, ಮಲೆಯಾಳಂ ಮತ್ತು ಬಂಗಾಳಿ) ಚಿತ್ರಮಂದಿರಗಳಿಗೆ ದಾಂಗುಡಿ ಇಡಲಿದೆ.ನಾವು ಘಟೋತ್ಕಚನ 5 ವರ್ಷಗಳ ಬಾಲ್ಯ ಜೀವನ ಹಾಗೂ ಯೌವ್ವನದ ಸಾಹಸಗಾಥೆಗಳನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಒಂದಿಲ್ಲ ಒಂದು ಕಾರಣಕ್ಕ್ಕೆ ಘಟೋತ್ಕಚನನ್ನು ಎಲ್ಲರೂ ಇಷ್ಟಪಡುತ್ತಾರೆ ಎನ್ನುತ್ತಾರೆ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್. ಇದು ಅವರ ಎರಡನೇ ಅನಿಮೇಷನ್ ಚಿತ್ರ. ಇದಕ್ಕೂ ಮೊದಲು ಅಲ್ಲಾವುದ್ದೀನನ್ನು ಅನಿಮೇಟ್ ಮಾಡಿದ್ದರು. ಕಲಾವಿದರಿಗೆ ನಿರ್ದೇಶನ ಮಾಡುವುದು ಕಷ್ಟ. ನಾವು ಒಂದು ಹೇಳಿದರೆ ಅವರೊಂದು ಮಾಡಿ ತೋರಿಸುತ್ತಾರೆ. ಆದರೆ ಅನಿಮೇಷನ್ ಚಿತ್ರಗಳು ಹಾಗಲ್ಲ. ನಮಗೆ ಒಪ್ಪುವಂತೆ ಪಾತ್ರಗಳನ್ನ್ನು ತೆರೆಯ ಮೇಲೆ ತೋರಿಸಬಹುದು. ಇವು ಒಂದು ರೀತಿ ಖುಷಿ ಕೊಡುತ್ತವೆ ಎನ್ನುತ್ತಾರೆ ಸಿಂಗೀತಂ.ಈ ಬೇಸಿಗೆಯಲ್ಲಿ ಮಕ್ಕಳು ಹಾಗೂ ಮನೆಮಂದಿಗೆ ಘಟೋತ್ಕಜ ಉತ್ತಮ ಮನರಂಜನೆ ನೀಡಲಿದ್ದಾನೆ. ಚಿತ್ರದ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದ ನಿರ್ಮಾಪಕರು, ಚಿತ್ರೀಕರಣಕ್ಕಾಗಿ 35 ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಅನಿಮೇಷನ್ ಚಿತ್ರ ತಯಾರಾಗುತ್ತಿದೆ ಎನ್ನುತ್ತಾರೆ.ಮೇ 23ರಂದು ಘಟೋತ್ಕಚ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಸನ್ ಅನಿಮ್ಯಾಟಿಕ್ಸ್ ಬ್ಯಾನರ್‌ನಡಿ ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆಯನ್ನು ಸಿಂಗೀತಂ ಶ್ರೀನಿವಾಸರಾವ್ ಹೊತ್ತಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ, ದಲೇರ್ ಮೆಹಂದಿ, ಶ್ರೇಯಾ ಘೋಷಾಲ್, ಸುದೇಶ್ ಭೋಂಸ್ಲೆ, ಶಾನ್ ಮತ್ತಿತ್ತರ ಗಾಯಕರು ಘಟೋತ್ಕಚನಿಗೆ ಡಬ್ಬಿಂಗ್ ಮಾಡಿದ್ದಾರೆ.ಒಟ್ಟಿನಲ್ಲಿ ಅನಿಮೇಷನ್ ಚಿತ್ರಗಳು ಹಿರಿ-ಕಿರಿಯರೆನ್ನದೆ ಎಲ್ಲರನ್ನೂ ಪರದೆ ಕಣ್ಣ್ಣು ಕೀಲಿಸುವಂತೆ ಹಾಗೂ ತಮ್ಮ ಇರುವನ್ನೇ ಮರೆಯುವಂತೆ ಮಾಡುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಬೇಸಿಗೆ ಮನರಂಜನೆ ತಣಿಸಲು ಇದಕ್ಕಿಂತ ಉತ್ತಮ ಪುರಾಣ ಪ್ರಸಿದ್ಧ ಚಿತ್ರ ಸಿಗಲಿಕ್ಕಿಲ್ಲ.
(ಕರ್ಟೆಸಿ: ದಟ್ಸ್‌ಕನ್ನಡ)

Thursday, May 8, 2008

"ಜೀ ಕನ್ನಡ" ಸೆಕಂಡ್ ಯಾನಿವರ್ಸರಿ

ಕಿರುತೆರೆಗೆ ಪದಾರ್ಪಣೆ ಮಾಡಿದ ಎರಡೇ ವರ್ಷದಲ್ಲಿ ಕನ್ನಡಿಗರ ಮನಗೆದ್ದು ಕನ್ನಡಿಗರ ಮನೆಮಾತಿನ ವಾಹಿನಿ ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಕನ್ನಡಿಗರ ಕಣ್ಮಣಿ ಜೀ ಕನ್ನಡ, ಸ್ಥಾಪನೆಯ ಎರಡೇ ವರ್ಷದಲ್ಲಿ ಉತ್ತಮ ಹಾಗೂ ವೈವಿಧ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕನ್ನಡಿಗರ ಮನಗೆದ್ದಿದೆ.ಇದೇ ಮೇ 11ಕ್ಕೆ ಜೀ ಕನ್ನಡ ಎರಡನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಎರಡನೇ ವರ್ಷದ ಸಂಭ್ರಮದಲ್ಲಿ ಜೀಕನ್ನಡ ಪ್ರತಿದಿನ ಸಂಜೆ 7 ಗಂಟೆಗೆ 30 ನಿಮಿಷಗಳ ಸುದ್ದಿ ಪ್ರಸಾರವನ್ನು ಪ್ರಾರಂಭಿಸುತ್ತಿದೆ. ವಿಶೇಷವೆಂದರೆ ಸುದ್ದಿ@೭ ವಾರ್ತಾ ವಾಚಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಮೇ 5ರಿಂದ ನೇರಪ್ರಸಾರದ ಸುದ್ದಿ ಪ್ರಾರಂಭವಾಗಿದ್ದು ಹಿರಿತೆರೆಯ ತಾರೆಗಳನ್ನು ಸುದ್ದಿ ವಾಚನೆಗೆ ಬಳಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಪ್ರಪ್ರಥಮವಾಗಿ ಜೀ ಕನ್ನಡ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದೆ. ಈ ಎರಡು ವರ್ಷಗಳಲ್ಲಿ ಹಲವಾರು ನೂತನ ಪ್ರಯೋಗಗಳನ್ನು ಜೀ ಕನ್ನಡ ಮಾಡಿದೆ. ಇತ್ತೀಚೆಗೆ ಈ ವಾಹಿನಿಯ ಇನ್ನೊಂದು ಸಾಧನೆಯಾಗಿ ದುಬೈನಲ್ಲಿ ನಡೆಸಿದ ಕಾರ್ಯಕ್ರಮವೊಂದು ಸಾಕ್ಷಿಯಾಗಿದೆ. ಅನಿವಾಸಿ ಕನ್ನಡಿಗರಿಗಾಗಿ ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದೆ. ಜೀ ಕನ್ನಡ, ಕನ್ನಡ ಚಿತ್ರರಂಗದ ನಟರಾದ ದರ್ಶನ್, ವಿಜಯ ರಾಘವೇಂದ್ರ, ದಿಗಂತ್ ಹಾಗೂ ನಟಿಯರಾದ ಅನುಪ್ರಭಾಕರ್, ನೀತೂ ಮುಂತಾದವರೊಡನೆ ದುಬೈನಲ್ಲಿ ರಸಸಂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಿತ್ತು. ಮೇ 11ರಂದು ಬೆಳಿಗ್ಗೆ 11ಕ್ಕೆ ಜೀ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಸ್ಪರ್ಧಾ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮಗಳು, ಸಿನೆಮಾ, ಎಲ್ಲದರಲ್ಲೂ ತನ್ನತನವನ್ನು ಜೀ ಕನ್ನಡ ಮೆರೆದಿದೆ. ಕಳೆದ ವರ್ಷ ಜೀ ಕನ್ನಡದ ಕಾರ್ಯಕ್ರಮಗಳಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಅತ್ಯಂತ ಯಶಸ್ವಿ ಕಾರ್ಯಕ್ರಮ ಎನಿಸಿಕೊಂಡಿತ್ತು. ಅಲ್ಲದೇ ಕುಣಿಯೋಣು ಬಾರಾ, ಬಾಳೇ ಬಂಗಾರ, ಯಾರಿಗುಂಟು ಯಾರಿಗಿಲ್ಲ, ಕಾಮಿಡಿ ಕಿಲಾಡಿಗಳು, ಧಾರಾವಾಹಿಗಳಾದ ಏಕೆ ಹೀಗೆ ನಮ್ಮ ನಡುವೆ, ಅನುಪಮ, ಅಕ್ಕ ಯಶಸ್ವಿಯಾಗಿವೆ.ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿದ 'ಕಾಮಿಡಿ ಕಿಲಾಡಿಗಳು' ಕರ್ನಾಟಕದ ಕಾಮಿಡಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಪ್ರಾರಂಭಿಸಿದ ಕರ್ನಾಟಕ ಚಲನಚಿತ್ರ ಗೀತೆ ಗಾಯನದಲ್ಲಿ ದಿಗ್ಗಜರು ಎನಿಸಿಕೊಂಡವರ ನೆನೆಕೆಯ 'ಗುಣಗಾನ' ಕಾರ್ಯಕ್ರಮ ಕೂಡ ಕಿರುತೆರೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಉತ್ತಮ ಯುವ ತಂತ್ರಜ್ಞರು ಹಾಗೂ ಸೃಜನಶೀಲ ವ್ಯಕ್ತಿಗಳನ್ನು ಹೊಂದಿರುವ ಜೀ ಕನ್ನಡ ಕೇವಲ ಎರಡೇ ವರ್ಷಗಳಲ್ಲಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನೆ ಮನದಲ್ಲಿ ಅಚ್ಚೊತ್ತಿದ್ದು ಇನ್ನೂ ಹಲವು ಪ್ರಥಮಗಳನ್ನು ಕರ್ನಾಟಕದ ಕಿರುತೆರೆಗೆ ನೀಡಲಿದೆ. ಉತ್ತಮ ಮನರಂಜನಾ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಕನ್ನಡಿಗರನ್ನು ಕನ್ನಡ ವಾಹಿನಿ ವೀಕ್ಷಣೆಯತ್ತ ಸೆಳೆಯಲು ಜೀ ಕನ್ನಡ ಪ್ರಯತ್ನಿಸುತ್ತಿದೆ ಎಂದು ಜೀ ಕನ್ನಡದ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದರು.(ಕರ್ಟೆಸಿ: ದಟ್ಸ್‌ಕನ್ನಡ)

Monday, May 5, 2008

ಸಿ.ವಿ.ಎಲ್.ಶಾಸ್ತ್ರಿಗೆ ದಾದಾಸಾಹೇಬ್ ಫಾಲ್ಕೆ ಗೌರವ

ಕನ್ನಡದ ಚಿತ್ರರಂಗದ ಹಿರಿಯ ನಿರ್ಮಾಪಕ ಸಿ.ವಿ.ಎಲ್.ಶಾಸ್ತ್ರಿ ಅವರಿಗೆ ದೇಶದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಗಿದೆ. ಮುಂಬೈನಲ್ಲಿ ಗುರುವಾರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿಂದಿ ಚಿತ್ರರಂಗದ ಹಳೆ ನಟ ರಾಜೇಶ್ ಖನ್ನಾ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಶಾಸ್ತ್ರಿ ಅವರಿಗೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ದಾದಾಸಾಹೇಬ್ ಫಾಲ್ಕೆ ಅಕಾಡೆಮಿಯ ಅಧ್ಯಕ್ಷರಾದ ಸಂತೋಷ್ ಸಿಂಗ್ ಜೈನ್ ಉಪಸ್ಥಿತರಿದ್ದರು.ಕರ್ನಾಟಕದಲ್ಲಿ ಟೂರಿಂಗ್ ಟಾಕೀಸ್ ಕ್ರಾಂತಿಗೆ ನೇತೃತ್ವ ವಹಿಸಿದ್ದ ಹಾಗೂ ಉದ್ಯಮಿ ಸಿ.ವಿ.ಎಲ್.ಶಾಸ್ತ್ರಿ ಸದಭಿರುಚಿಯ ಹಲವಾರು ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿರುವ 'ಮಲಯ ಮಾರುತ', 'ಆಸೆಯ ಬಲೆ' ಮತ್ತು 'ಕಳ್ಳ ಕುಳ್ಳ' ಚಿತ್ರಗಳು ಶಾಸ್ತ್ರಿ ಅವರ ನಿರ್ಮಾಣದಲ್ಲಿ ಸಿದ್ಧವಾದ ಕನ್ನಡ ಸಿನೆಮಾಗಳು ಚಿತ್ರರಸಿಕರ ತನ್ಮನ ತಣಿಸಿವೆ.ಶಾಸ್ತ್ರಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಆಗಿದ್ದರು. ಈ ಹಿಂದೆ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ನಿರ್ಮಾಪಕ ಆರ್.ಲಕ್ಷ್ಮಣ್ ಅವರಿಗೆ ಇದೇ ರೀತಿಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.
(ಕರ್ಟೆಸಿ: ದಟ್ಸ್‌ಕನ್ನಡ)

Wednesday, April 30, 2008

ನಕಲಿ ಮುದ್ರಾಂಕದ ಬ್ರಹ್ಮ ತೆಲಗಿಗೆ ಕೋಪವೇಕೆ?

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಕರ್ನಾಟಕಕ್ಕೆ ಅಪಕೀರ್ತಿ ತಂದ ಮಹನೀಯರಲ್ಲಿ ಅಬ್ದುಲ್ ಕರೀಂ ತೆಲಗಿ ಒಬ್ಬನು. ಐದುನೂರು , ಸಾವಿರ ರೂಪಾಯಿಯ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಡುವ ಜಾಲದಲ್ಲಿ ವ್ಯಾಪಾರ ಅಷ್ಟೇನೂ ಲಾಭದಾಯಕವಾಗಿಲ್ಲ ಎಂದು ಪರಿಗಣಿಸಿ ಭಾರತದಲ್ಲಿ ನಕಲಿ ಸ್ಟಾಂಪ್ ಪೇಪರುಗಳ ಬೃಹತ್ ಉದ್ಯಮವನ್ನು ಸ್ಥಾಪಿಸಿದ ಹೆಗ್ಗಳಿಕೆ ಪಾತ್ರನಾದವನು! ಆತ ಸೃಷ್ಟಿಸಿದ ನಕಲಿ ಮುದ್ರಾಂಕದ ನೆರವಿನಿಂದ ಸ್ಥಿರಾಸ್ತಿ ಮಾರಾಟ ಮತ್ತು ದಾಖಲೆ ಪತ್ರ ಸೃಷ್ಟಿಗೆ ಈ ದೇಶದಲ್ಲಿ ಒಂದು ಹೊಸ ಆಯಾಮ ಬಂದದ್ದು ನಿಮಗೆ ಗೊತ್ತುಂಟು.ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆ ಎಂಬ ಮಾತು ತೆಲಗಿ ವಿಚಾರದಲ್ಲಂತೂ ನಿಜವಾಯಿತು. ಆತ ಮತ್ತು ಆತನ ಸಹಚರರು ಸೃಷ್ಟಿಸಿದ್ದ ನಕಲಿ ಛಾಪಾಕಾಗದ ಮಹಾಜಾಲವನ್ನು ಬೇಧಿಸಿದ ಈ ದೇಶದ ಪೊಲೀಸರು ಅವನನ್ನು ದಸ್ತಗಿರಿ ಮಾಡಿ ಕೇಸುಗಳ ಮೇಲೆ ಕೇಸು ಕೇಸುಗಳ ಮೇಲೆ ಕೇಸು ಜಡಿದು ಅವನನ್ನು ಸೆರೆಮನೆಗೆ ತಳ್ಳಿದ ಸುದ್ದಿಗಳನ್ನು ನೀವೆಲ್ಲ ಓದಿಯೇ ಇರುತ್ತೀರಿ. ತೆಲಗಿಯ ವಂಚನೆ ಪ್ರಕರಣವನ್ನು ವಿಚಾರಣೆಗೆ ಒಡ್ಡಿರುವ ನ್ಯಾಯಾಲಯ ಆತನಿಗೆ ಯಾವ ಯಾವ ತಪ್ಪಿಗೆ ಎಷ್ಟೆಷ್ಟು ವರ್ಷ ಸಾಧಾರಣ, ಅಸಾಧಾರಣ, ಕಠಿಣ ಶಿಕ್ಷೆ ವಿಧಿಸಿದೆ ಎಂಬ ಲೆಕ್ಕ ನ್ಯಾಯಲಯಕ್ಕೆ ಮಾತ್ರ ಗೊತ್ತಿದೆ. ನ್ಯಾಯಾಲಯ ಅಪ್ಪಣೆ ಮಾಡಿರುವ ಒಟ್ಟು ಶಿಕ್ಷೆಯನ್ನು ತೆಲಗಿ ಪೂರೈಸಬೇಕಾದರೆ ಕನಿಷ್ಠಪಕ್ಷ ಅವ ಹತ್ತು ಜನ್ಮವನ್ನಾದರೂ ಎತ್ತಿಬರಬೇಕು.ತೆಲಗಿಯ ಜತೆ ಶಾಮೀಲಾಗಿದ್ದರೆಂದು ಆಪಾದಿಸಲಾಗಿದ್ದ ಕರ್ನಾಟಕದ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕಾನೂನಿನ ಕಣ್ಣಿನಿಂದ ಪಾರಾದರೇನೋ ನಿಜ. ಆದರೆ, ನಕಲಿ ಮುದ್ರಾಂಕದ ಬ್ರಹ್ಮ ತೆಲಗಿಗೆ ಮಾತ್ರ ಜೈಲಿನಲ್ಲಿ ಚಕ್ಕಿ ಪೀಸುವ ಯೋಗ ತಪ್ಪಲಿಲ್ಲ. ತೆಲಗಿ ಈಗ ಪುಣೆಯ ಯರವಾಡ ಸೆರೆಮನೆಯಲ್ಲಿ ಬಂಧಿಯಾಗಿದ್ದು ಅಲ್ಲಿಂದಲೇ ತನ್ನ ವಕೀಲರ ಮುಖಾಂತರ ತನ್ನ ವಿರುದ್ಧದ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಅವನನ್ನು ಬಾಧಿಸುತ್ತಿರುವ ರೋಗಗಳ ಪಟ್ಟಿಯಲ್ಲಿ ಎಚ್ ಐ ವಿ ಕೂಡ ಒಂದು ಎನ್ನುವುದು ಖೇದಕರ.ಪುರಂದರದಾಸರು, ಕನಕದಾಸರು, ಮಂತ್ರಾಲಯದ ಗುರುಗಳು, ಜೇ ಸಂತೋಷಿಮಾ, ಭಕ್ತ ಕಬೀರ ಮುಂತಾದ ಸಂತರು ಮತ್ತು ಮಹಾಮಹಿಮರ ಬಗ್ಗೆ ನಮ್ಮ ದೇಶದಲ್ಲಿ ಚಿತ್ರಗಳನ್ನು ನಿರ್ಮಿಸುವ ಪರಿಪಾಠವಿದೆ. ಹಾಗೆಯೇ, ಚಾರ್ಲಸ್ ಶೋಭರಾಜ್, ವೀರಪ್ಪನ್, ಚಂಬಲ್ ರಾಣಿಯಂತಹ ಖದೀಮರ ಬಗೆಗೂ ಚಿತ್ರಗಳನ್ನು ತೆಗೆಯಲಾಗುತ್ತದೆ. ಅಂತೆಯೇ, ಆಧುನಿಕ ಭಾರತದಲ್ಲಿ ಹೊಸ ಬಗೆಯ ವಂಚನೆ ಜಾಲವನ್ನು ಸೃಷ್ಟಿಸಿದ ಖ್ಯಾತಿಗೆ ಪಾತ್ರವಾದ ಕರೀಂ ತೆಲಗಿಯ ಜೀವನ ಚರಿತ್ರೆಯನ್ನು ಆಧರಿಸಿ ಬಾಲಿವುಡ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.ಆ ಹಿಂದಿ ಚಲನಚಿತ್ರದ ಹೆಸರು ಮುದ್ರಾಂಕ್. ಚಿತ್ರದಲ್ಲಿ ಒಂದು ಭಾರೀ ಐಟಂ ಸಾಂಗ್ ಇದೆ ( ಐಟಂ ಸಾಂಗ್ ಅಂತ ಯಾಕೆ ಕರೀತಾರೆ ?). ಈ ನೃತ್ಯಕ್ಕೆ ಕುಣಿಯವ ಬೆಡಗಿ ರಾಖಿ ಸಾವಂತ್. ಅದೆಲ್ಲ ಸರೀನೆ. ಆದರೆ ಚಿತ್ರ ತೆಲಗಿಯ ಜೀವನವನ್ನು ಸರಿಯಾಗಿ ಬಿಂಬಿಸಬೇಕು, ಅಪಾರ್ಥ ಕೊಡುವಂತೆ ಚಿತ್ರೀಕರಿಸಿದರೆ ತೆಲಗಿಯ ವಿರುದ್ಧ ಇನ್ನೂ ನಡೆಯುತ್ತಿರುವ ವಿಚಾರಣೆಯ ಮೇಲೆ ಕರಿನೆರಳು ಬೀಳುತ್ತದೆ ಎಂದು ತೆಲಗಿಯ ವಕೀಲರ ಆಕ್ಷೇಪ ಮಾಡಿದ್ದರು. ಅದರಂತೆ, ನ್ಯಾಯಾಲಯ ಚಿತ್ರದ ತುಣುಕುಗಳನ್ನು ಒಮ್ಮೆ ತೆಲಗಿಗೆ ತೋರಿಸಿಬೇಕು ಎಂದು ಆಜ್ಞೆ ಮಾಡಿತು.ಕೋರ್ಟ್ ಆರ್ಡರ್ ಪ್ರಕಾರ ಏಪ್ರಿಲ್ 22ರಂದು ಯರವಾಡ ಸೆರೆಮನೆಯಲ್ಲಿ ಮುದ್ರಾಂಕ್ ಚಿತ್ರವನ್ನು ತೆಲಗಿ ಮತ್ತು ಆತನ ವಕೀಲರಿಗೆ ತೋರಿಸಲಾಯಿತು. ಚಿತ್ರ ನೋಡಿದ ತೆಲಗಿ ಅಸಮಾಧಾನ ವ್ಯಕ್ತಪಡಿಸಿದ. ರಾಖಿಸಾವಂತ್ ನೃತ್ಯ ಅವನಿಗೆ ಸ್ವಲ್ಪವೂ ಹಿಡಿಸಲಿಲ್ಲ ಎಂದು ಆನಂತರ ವಕೀಲಕರು ಜೈಲಿನ ಹೊರಗಡೆ ನೆರೆದಿದ್ದ ಮಾಧ್ಯಮ ಮಿತ್ರರಿಗೆ ಹೇಳಿದರು. ಆದರೆ ಇದೇ ಚಿತ್ರದಲ್ಲಿ ಸಂಭಾವನಾ ಸೇಠ್ ಅವರ ಮೇಲೆ ಚಿತ್ರೀಕರಿಸಲಾಗಿರುವ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ ಎಂದು ತೆಲಗಿ ಸಂತೋಷ ಸೂಚಿಸಿದನು ಎಂದೂ ಅವನ ವಕೀಲರು ತಿಳಿಸಿದರು.ತನ್ನ ಕಥೆಯನ್ನು ಆಧರಿಸಿ ತಾನೇ ಒಂದು ಭಾರೀ ಬಜೆಟ್ಟಿನ ಚಿತ್ರ ನಿರ್ಮಾಣಮಾಡುವ ಆಸೆ ತೆಲಗಿಗೆ ಇತ್ತು. ಆದರೆ ಕನಸು ಮಣ್ಣುಪಾಲಾಯಿತು. ಹಾಗೆ ನೋಡಿದರೆ ಮುದ್ರಾಂಕ್ ಸಣ್ಣ ಬಜೆಟ್ಟಿನ ಚಿತ್ರ.ಒಂದು ವೇಳೆ ತೆಲಗಿಯೇ ಚಿತ್ರ ನಿರ್ಮಿಸಿಸದ್ದಿದ್ದರೆ ಅದು ನಿಜಕ್ಕೂ ಭಾರೀ ಬಜೆಟ್ಟಿನ ಚಿತ್ರವೇ ಆಗುತ್ತಿದ್ದುದರಲ್ಲಿ ಸಂಶಯವಿಲ್ಲ. ತೆಲಗಿಯ ಬಜೆಟ್ಟಿನ ಮುಂದೆ ಯಶರಾಜ್ ಬ್ಯಾನರಿನ ಬಜೆಟ್ಟುಗಳೆಲ್ಲಾ ಯಾವಮಹಾ !
(ಕರ್ಟೆಸಿ: ದಟ್ಸ್ ಕನ್ನಡ)

Monday, April 28, 2008

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು!!


e- ಪ್ರೀತಿ' ಚಿತ್ರದ ನಾಯಕಿಯಾಗಿ ಮತ್ತೊಬ್ಬ ಅನಿವಾಸಿ ಭಾರತೀಯ ಚೆಲುವೆ ಕನ್ನಡ ಚಿತ್ರರಂಗಕ್ಕ್ಕೆ ಅಡಿ ಇಟ್ಟ್ಟಿದ್ದಾರೆ. ಆಕೆಯ ಹೆಸರು ನೀನಾ ಮಹೇಶ್. 'In Waiting' ಮತ್ತು 'Secret Leave' ಎಂಬ ಎರಡು ಕಿರು ನಾಟಕಗಳಲ್ಲಿ ಈಗಾಗಲೇ ನೀನಾ ತಾನ್ಯಾರೆಂದು ನಿರೂಪಿಸಿಕೊಂಡಿದ್ದಾರೆ.ಹೋಗಲಿ ಈಕೆಗೆ ಕನ್ನಡ ಬರುತ್ತಾ ಅಂದ್ರೆ, ಈಗಾಗಲೇ ಈಕೆ ಕನ್ನಡ ತರಗತಿಗಳಿಗೆ ಹಾಜರಾಗಿ ಕನ್ನಡ ಅಆಇಈ ತಿದ್ದುತ್ತಿದ್ದಾರೆ. ಕನಿಷ್ಟ ಪಕ್ಷ ದಿನಕ್ಕೊಂದು ಕನ್ನಡ ಪದ ಕಲಿಯಲು ಪಣ ತೊಟ್ಟಿದ್ದಾರೆ. ನೀನಾ ಬರೀ ಸುಂದರಿಯಷ್ಟೇ ಅಲ್ಲ ಮನಃಶಾಸ್ತ್ರದಲ್ಲಿ ಮಿಚಿಗನ್ ವಿಶ್ವವಿದ್ಯಾಲಯದ ಸ್ನಾತಕ ಪದವಿ ಪಡೆದ ಜಾಣೆ ಸಹ. ಈಗ 'ಈ ಪ್ರೀತಿ' ಚಿತ್ರೀಕರಣಕ್ಕಾಗಿ ಯುಎಸ್‌ಎ ನಲ್ಲಿದ್ದಾರೆ ನೀನಾ ಮಹೇಶ್.ಕನ್ನಡ ಅಂದ್ರೆ ನಂಗೆ ಪಂಚಪ್ರಾಣ ಎಂದು ಹೇಳಿ ತಮ್ಮ ಭಾಷಾಭಿಮಾನವನ್ನ್ನು 'ಈ ಪ್ರೀತಿ' ಚಿತ್ರದ ಮುಹೂರ್ತದ ಸನ್ನಿವೇಶದಲ್ಲಿ ತೋಡಿಕೊಂಡರು. ಬೆಂಗಳೂರು ಮಲ್ಲೇಶ್ವರಂನ ದಕ್ಷಿಣಮುಖ ನಂದಿ ತೀರ್ಥ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಚಿತ್ರದಲ್ಲಿ ಆಕೆಯದು ನೀಲು ಪಾತ್ರವಂತೆ. ಬೆಳ್ಳಿತೆರೆಯ ಈ ಪಾತ್ರ ನೀನಾ ಮಹೇಶ್ ಹೃದಯಕ್ಕೆ ತೀರಾ ಆಪ್ತವಾಗಿದೆಯಂತೆ. 'ಈ ಪ್ರೀತಿ' ಒಂಥರಾ ತಮಾಷೆಯ ಪ್ರೇಮಕಥೆ. ಡಾ.ನಾರಾಯಣ ಹೊಸಮನೆ ಹಾಗೂ ಪ್ರದೀಪ್ ಬೇಕಲ್, ಮಹಿ ಮಹೇಶ್ ಮತ್ತು ಎಸ್.ವಿ.ನಾರಾಯಣ ಸ್ವಾಮಿ ಒಟ್ಟುಗೂಡಿ 'ಈ ಪ್ರೀತಿ'ಯನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನಿವಾಸಿ ಭಾರತೀಯರಾದ ಪ್ರಿಯಾ ಭಾರತಿ ನಿರ್ದೇಶಕಿಯಾಗಿ ತಮ್ಮ ಚಿತ್ರಪಥವನ್ನು ಆರಂಭಿಸಿದ್ದಾರೆ. ಜಯಂತ ಕಾಯ್ಕಿಣಿ ಸಾಹಿತ್ಯ ಮತ್ತು ಸಂಭಾಷಣೆಗಾಗಿ ಪ್ರಯತ್ನಗಳು ಮುಂದುವರೆದಿವೆ. ದಿಗಂತ್, ತೇಜಸ್ವಿನಿ, ನೀನಾ ಮಹೇಶ್ ಮತ್ತು ಭರತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
(ಕರ್ಟೆಸಿ: ದಟ್ಸ್‌ಕನ್ನಡ)

Tuesday, April 22, 2008

'ಪರಮೇಶ ಪಾನ್‌ವಾಲ' ಗೆಟಪ್ಪಿನಲ್ಲಿ ಶಿವರಾಜ್ ಕುಮಾರ್!


ಏ.21 ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹೊಸ ಚಿತ್ರ ಸೆಟ್ಟೇರಿತು. ಚಿತ್ರದ ಹೆಸರು 'ಪರಮೇಶ ಪಾನ್‌ವಾಲ'. ಪರಮೇಶ ಎನ್ನುವುದು ಚಿತ್ರದ ಟೈಟಲ್ಲು. ಪಾನ್‌ವಾಲ ಎಂಬುದು ಚಿತ್ರದ ಅಡಿ ಬರಹ. ಥೇಟು 'ಡಾನ್' ಚಿತ್ರದಲ್ಲಿನ ಶಾರುಖ್‌ ಖಾನ್ ಗೆಟಪ್ಪಿನಲ್ಲಿ ಶಿವರಾಜ್‌ ಕುಮಾರ್ ದರ್ಶನ ಕೊಡಲಿದ್ದಾರೆ. ಇದಕ್ಕಾಗಿ ಶಾರುಖ್ ದೇಹದ, ಶಿವರಾಜ್ ಮುಖದ ವಿನ್ಯಾಸವನ್ನು ಆಮಂತ್ರಣ ಪತ್ರದಲ್ಲಿ ವಿನ್ಯಾಸಗೊಳಿಸಿದ್ದರು ಮಣಿ. ಶಾರುಖ್‌ರ 'ಡಾನ್' ಚಿತ್ರದ ಅದೇ ಡ್ರೆಸ್ಸು, ಅದೇ ಕಡಗ, ಅದೇ ಭಂಗಿ, ಅದೇ ಅಂಗಿ... ಆದರೆ ಮುಖ ಮಾತ್ರ ಶಿವರಾಜ್‌ರದ್ದು. ಇದೆಲ್ಲಾ ಪ್ರಚಾರಕ್ಕಾಗಿ ಮಣಿ ಮಾಡಿದ ಟ್ರಿಕ್ಕು ಅಷ್ಟೇ.ಡಾನ್ ಚಿತ್ರದಲ್ಲಿ ಪಾನ್ ಜಗಿಯುತ್ತಾ ಗಲ್ಲಿ ಗಲ್ಲಿ ಸುತ್ತುತ್ತಿರುತ್ತಾನೆ ಶಾರುಖ್. ಶಿವರಾಜ್ ಕುಮಾರ್ ಅವರದೂ ಇದೇ ರೀತಿಯ ಪಾನ್‌‍ವಾಲಾ ಪಾತ್ರನಾ ಎಂಬುದನ್ನು ಕಾದು ನೋಡಬೇಕಾಗಿದೆ. ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ 'ಡಾನ್' ಹೆಸರಿನ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು.'ಅಂತು ಇಂತು ಪ್ರೀತಿ ಬಂತು' ಚಿತ್ರದ ನಿರ್ಮಾಣದ ನಂತರ ಆಂಧ್ರದ ಆದಿತ್ಯ ಬಾಬು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅರಸು ಮತ್ತು ಆಕಾಶ್ ಚಿತ್ರಗಳ ಹಿಟ್ ನಿರ್ದೇಶಕ ಮಹೇಶ್ ಬಾಬು 'ಪರಮೇಶ ಪಾನ್‌ವಾಲ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರದ ಮೊದಲ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.
(ಕರ್ಟೆಸಿ: ದಟ್ಸ್‌ಕನ್ನಡ ಸಿನಿವಾರ್ತೆ)

Monday, April 21, 2008

ಡಾ.ರಾಜ್ ವ್ಯಕ್ತಿತ್ವವನ್ನು ದಾಖಲಿಸುವ ಪವರ್ ಸ್ಟಾರ್ ಪುನೀತ್ ಪುಸ್ತಕ


ಡಾ.ರಾಜ್‌ಕುಮಾರ್ ಅವರ ಸಂಪೂರ್ಣ ವ್ಯಕ್ತಿತ್ವದ ಪುಸ್ತಕ ಶೀಘ್ರದಲ್ಲೇ ಹೊರಬರಲಿದೆ. ಅವರ ವ್ಯಕ್ತಿತ್ವದ ಹಲವು ಮಜಲುಗಳನ್ನು ಪರಿಚಯಿಸುವ ಪುಸ್ತಕವನ್ನು ಪವರ್ ಸ್ಟಾರ್ ಪುನೀತ್ ಹೊರತರುತ್ತಿದ್ದಾರೆ. ಪುಸ್ತಕದ ಹೆಸರು 'ಡಾ.ರಾಜ್‌ಕುಮಾರ್, ವ್ಯಕ್ತಿ ಹಿಂದಿನ ವ್ಯಕ್ತಿತ್ವ'. ತಮ್ಮ ಆಪ್ತ ಗೆಳೆಯರು, ಸಹಚರರು, ಒಡನಾಡಿಗಳು ಮತ್ತು ಬಂಧುಗಳೊಂದಿಗೆ ಡಾ.ರಾಜ್ ಹಂಚಿಕೊಂಡ ಅಪರೂಪದ ಕ್ಷಣಗಳು ಪುಸ್ತಕದಲ್ಲಿ ಅನಾವರಣಗೊಳ್ಳಲಿವೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರಬರಲಿರುವ ಪುಸ್ತಕ ಕೆಲವು ಅಪರೂಪದ ಘಟನೆಗಳನ್ನು ದಾಖಲಿಸಲಿದೆ.ಡಾ.ರಾಜ್ ಬದುಕಿದ್ದಾಗಲೇ ಈ ಪುಸ್ತಕವನ್ನು ಹೊರತರುವ ಉದ್ದೇಶ ಪುನೀತ್ ಅವರಿಗಿತ್ತು. ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡ ಮಧುರ ಕ್ಷಣಗಳನ್ನು ತಮ್ಮ ಪುಸ್ತಕದಲ್ಲಿ ಓದಿ ಸಂತೋಷ ಪಡುತ್ತಾರೆ ಎನ್ನುವುದು ಅವರ ಬಯಕೆಯಾಗಿತ್ತು. ಆದರೆ ಅದು ಕನಸಾಗಿಯೇ ಉಳಿಯಿತು. ಅಪ್ಪಾಜಿ ಅವರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಈ ಪುಸ್ತಕದ ಉದ್ದೇಶ. ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿರುವ ಡಾ.ರಾಜ್‌ ಅವರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವುದೇ ನನ್ನ ಪುಸ್ತಕ ಗುರಿ. ಮುಂದಿನ ಅಪ್ಪಾಜಿ ಹುಟ್ಟುಹಬ್ಬದಂದು ಈ ಪುಸ್ತಕವನ್ನು ಅಭಿಮಾನಿಗಳಿಗೆ ಸಮರ್ಪಿಸಲಿದ್ದೇನೆ ಎನ್ನುತ್ತಾರೆ ಪುನೀತ್.ಡಾ.ರಾಜ್‌ಕುಮಾರ್ ಬಂಧುಗಳೊಂದಿಗೆ, ಒಡನಾಡಿಗಳೊಂದಿಗೆ ಕಳೆದ ಅಪರೂಪದ ಭಾವಚಿತ್ರಗಳು ಪುಸ್ತಕದಲ್ಲಿ ಇರುತ್ತವೆ. ಅತ್ಯಂತ ಅಪರೂಪದ 4 ಸಾವಿರ ಭಾವಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಡಾ.ರಾಜ್‌ರ ಮೇರು ಪ್ರತಿಭೆ, ವ್ಯಕ್ತಿತ್ವ, ಹಳೆ ನೆನಪು, ಅವರ ಸ್ವಭಾವ, ಆಪ್ತರು, ಜೀವನದಲ್ಲಿ ಎದುರಿಸಿದ ಕಷ್ಟ ನಷ್ಟಗಳು, ಸಂಗೀತ, ಯೋಗ...ಹೀಗೆ ಹತ್ತು ಹಲವು ಮುಖಗಳು ಅನಾವರಣಗೊಳ್ಳಲಿವೆ.ಪುನೀತ್‌ರ ಪುಸ್ತಕ ಅಪರೂಪದಲ್ಲೇ ಅಪರೂಪ ಎನ್ನುವ ರಾಜಣ್ಣನ ಭಾವಚಿತ್ರಗಳನ್ನು ಪ್ರಕಟಿಸಲಿದೆ. ಇದಕ್ಕಾಗಿ ರಾಜ್ ಅಭಿಮಾನಿಗಳು, ಆಪ್ತರು ತಮ್ಮ ಸಂಗ್ರಹದಲ್ಲಿರುವ ಭಾವಚಿತ್ರಗಳನ್ನು ತಮಗೆ ಕಳುಹಿಸಿದರೆ ಅವರಿಗೆ ಆಭಾರಿಯಾಗಿರುತ್ತೇನೆ ಎಂದಿದ್ದಾರೆ ಪುನೀತ್. ಡಾ.ರಾಜ್‌ ಅವರೊಂದಿಗೆ ಕಳೆದ ಅಪರೂಪದ ಭಾವಚಿತ್ರಗಳನ್ನು ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
(ಕರ್ಟೆಸಿ: ದಟ್ಸ್‌ಕನ್ನಡ)

Thursday, April 17, 2008

"ಬೇಗ ಚಂದ ಮಾಮ" ಸಾಂಗ್ಸ್ ರಿಲಿಸ್

ಕನ್ನಡ ಚಿತ್ರರಂಗದ ಬೇರುಗಳು ಬಲಿಷ್ಠವಾಗಿವೆ. ಹಾಗಾಗಿಯೇ ಹೊಸ ಕನಸುಗಳನ್ನು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಬರುವ ನಿರ್ಮಾಪಕ, ನಿರ್ದೇಶಕರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಕನ್ನಡ ಚಿತ್ರೋದ್ಯಮ ವೇದಿಕೆ ಒದಗಿಸುತ್ತದೆ. ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಅತ್ಯಂತ ಚಟುವಟಿಕೆಯಿಂದ ಇರಲು ಇದೂ ಒಂದು ಕಾರಣ. 'ಬಾ ಬೇಗ ಚಂದ ಮಾಮ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾಡುತ್ತಾ ಹೀಗೆಂದರು ಹಂಸಲೇಖಾ. ಬಿ.ಆರ್.ಪಂತುಲು ಅವರ 'ರತ್ನಗಿರಿಯ ರಹಸ್ಯ' ಚಿತ್ರದ ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ... ಹಾಡಿನ ಚರಣ ಈ ಚಿತ್ರಕ್ಕೆ ಸ್ಪೂರ್ತಿಎಂದರು.ಹೆಚ್ಚೂ ಕಡಿಮೆ ಇದೇ ರೀತಿಯ ಅಭಿಪ್ರಾಯ ಕರ್ತೆಸಿ ಕರ್ತೆಸಿ:ಕರ್ತೆಸಿ:ಕರ್ತೆಸಿ:ಕರ್ತೆಸಿವಿಷ್ಣುವರ್ಧನ್ ರ ಮನದಾಳದಿಂದಲೂ ಹೊರಹೊಮ್ಮಿದವು.ಶತಕ ಬಾರಿಸುವುದಕ್ಕಿಂತ ಪಂದ್ಯದ ಗೆಲ್ಲುವುದು ಮುಖ್ಯ.ನಿಮ್ಮ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಬಿ.ಎಚ್.ಮುರಳಿ ಈ ಹಿಂದೆ ಡಬ್ಬಿಂಗ್ ಕಲಾವಿದಹಾಗೂ ಹಾಡುಗಾರರಾಗಿದ್ದವರು. ಈಗ ತಮ್ಮ ಪ್ರಥಮ ಪ್ರಯತ್ನದಲ್ಲಿ ಬಾ ಬೇಗ ಚಂದ ಮಾಮದ ನಿರ್ದೇಶನ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.ಅವರ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ವಿಷ್ಣು ಬಾ ಬೇಗ ಚಂದ ಮಾಮ ಚಿತ್ರತಂಡಕ್ಕೆ ಹಾರೈಸಿದರು. ಬೆಂಗಳೂರಿನ ರಿಜಾಯ್ಸ್ ಆಡಿಟೋರಿಯಂನಲ್ಲಿ 'ಬಾ ಬೇ ಚಂ ಮಾ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ನಟಿ ಸುಧಾರಾಣಿ, ನಿರ್ದೇಶಕ ಬಿ.ಎಚ್.ಮುರಳಿ, ಪೂಜಾ ಗಾಂಧಿ, ರಾಜಕಾರಣಿಗಳಾದ ಸಲೀಂ ಅಹ್ಮದ್ ಮತ್ತು ಆರ್.ವಿ.ಹರೀಶ್, ಹರ್ಷಪ್ಪ ರೆಡ್ಡಿ, ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ ವೇಲು, ಬಾ ಬೇಗ ಚಂದ ಮಾಮದ ನಾಯಕ ದೀಪಕ್, ನಿರ್ಮಾಪಕ ಕುಮಾರಸ್ವಾಮಿ ಇನ್ನಿತರರು ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.'ಅಮರ ಮಧುರ ಪ್ರೇಮ' ಹೆಸರಿನ ಚಿತ್ರ 1982ರಲ್ಲಿ ತೆರೆಕಂಡಿತ್ತು. ಸುರೇಶ್ ಹೆಬ್ಳೀಕರ್ ಹಾಗೂ ಶೋಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಪಿ.ಆರ್.ರಾಮದಾಸ್ ನಾಯ್ಡು ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ರತ್ನಗಿರಿ ರಹಸ್ಯ ಚಿತ್ರದ ಅಮರ ಮಧುರ ಗೀತೆ ಇಷ್ಟಿಲ್ಲಾ ಸಿನೆಮಾ ಶೀರ್ಷಿಕೆಗಳಿಗೆ ಸ್ಫೂರ್ತಿಯಾಗುತ್ತಿರಬೇಕಾದರೆ, ನಮ್ಮ ಇಂದಿನ ನಿರ್ದೇಶಕ, ನಿರ್ಮಾಪಕರು ಅರ್ಥವಿಲ್ಲದ ಶೀರ್ಷಿಕೆಗಳನ್ನು ಯಾಕಾದರೂ ಇಡುತ್ತಿದ್ದಾರೋ ಅರ್ಥವಾಗುತ್ತಿಲ್ಲ! (ದಟ್ಸ್ ಕನ್ನಡ ವಾರ್ತ)

Tuesday, April 15, 2008

ಪುಜ ಗಾಂಧಿ ಇನ್ ಜರ್ನಲಿಸ್ಟ್ ರೋಲ್


''ಇದು ನನ್ನ ಪ್ರಥಮ ಪ್ರಯತ್ನ. ಸ್ನೇಹಿತರ ಜೊತೆ ಹೈದರಾಬಾದ್‌ಗೆ ಹೋಗಿದ್ದಾಗ ತೆಲುಗಿನ 'ಅನಸೂಯ' ಚಿತ್ರ ನೋಡಿದೆ. ಅದ್ಭುತವಾಗಿತ್ತು. ಈ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕು ಎಂದು ನಿರ್ಧರಿಸಿದೆ. ಅನಸೂಯ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದೇನೆ. ತೆಲುಗು ಚಿತ್ರವನ್ನು ನಿರ್ದೇಶಿಸಿದ ರವಿಬಾಬು ಅವರ ಅಸೋಸಿಯೇಟ್ ಆಗಿದ್ದ ಶಿವಗಣಪತಿ ಕನ್ನಡದ 'ಅನು' ಚಿತ್ರವನ್ನು ನಿರ್ದೇಶಿಸಲಿದ್ದಾರೆ.'' ಎಂದರು ನಿರ್ಮಾಪಕ ಬಾಲು.ತೆಲುಗಿನಲ್ಲಿ ಭರ್ಜರಿ ಪ್ರದರ್ಶನ ಕಂಡ ಅನಸೂಯ ಚಿತ್ರದಲ್ಲಿ ಭೂಮಿಕಾ ನಾಯಕಿಯಾಗಿ ನಟಿಸಿದ್ದರು. ಕನ್ನಡಕ್ಕ್ಕೆ ರಿಮೇಕಾಗುತ್ತಿರುವ 'ಅನು' ಚಿತ್ರದಲ್ಲಿ ಪೂಜಾಗಾಂಧಿ ನಟಿಸಲಿದ್ದಾರೆ. ಚಿತ್ರದಲ್ಲಿ ಪೂಜಾಗಾಂಧಿ ಕ್ರೈಮ್ ವರದಿಗಾರ್ತಿ. ವೈದ್ಯಕೀಯ ಕಾಲೇಜಿನಲ್ಲಿ ನಡೆಯುವ ಕೊಲೆ ರಹಸ್ಯವನ್ನು ಭೇದಿಸಲು ಬರುತ್ತಾಳೆ. ಆನಂತರ ಒಂದರ ಹಿಂದೆ ಒಂದು ಐದು ಹೆಣಗಳು ಬೀಳುತ್ತವೆ. ಆ ಕೊಲೆ ರಹಸ್ಯಗಳ ಜಾಡು ಅರಸಿ ಚಿತ್ರದ ನಾಯಕಿ ಹೊರಡುತ್ತಾಳೆ. ಚಿತ್ರಕಥೆ ಹಲವಾರು ಕುತೂಹಲ ಘಟ್ಟಗಳಲ್ಲಿ ಸಾಗುತ್ತದೆ. ಈ ಚಿತ್ರಕ್ಕೆ ನಾಯಕಿಯೇ ಕೇಂದ್ರಬಿಂದುವಾಗಿರುವ ಕಾರಣ ಪೂಜಾಗಾಂಧಿ ಸಖತ್ ಖುಷಿಯಾಗಿದ್ದರು. ದುನಿಯಾ ಚಿತ್ರದ ರಶ್ಮಿ ಮತ್ತು ನಾಗಕಿರಣ್ ವಿದ್ಯಾರ್ಥಿಗಳಾಗಿ ನಟಿಸುತ್ತಿದ್ದಾರೆ. ಮೊದಲೆ ತೆಲುಗು ಚಿತ್ರ ನೊಡಿರುವ ರಶ್ಮಿ ವೈದ್ಯಕೀಯ ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸುತ್ತಿರುವುದು ನನಗೇನು ಕಷ್ಟವಾಗುತ್ತಿಲ್ಲ ಎನ್ನುತ್ತಾರೆ. ಜಮಾನ, ಸಿಹಿಗಾಳಿ ಚಿತ್ರಗಳ ಛಾಯಾಗ್ರಹಣದ ನಂತರನಿರಂಜನ್ ಬಾಬು ಅವರಿಗೆ ಇದು ಮೂರನೆಯ ಚಿತ್ರ. ಚಿತ್ರದಲ್ಲಿ ನೈಟ್ ಎಫೆಕ್ಟ್ ಜಾಸ್ತಿ ಇರುವ ಕಾರಣ ಇವರ ಜವಾಬ್ದಾರಿ ಜಾಸ್ತಿ. ಇನ್ನು ಸಂಗೀತ ನಿರ್ದೇಶನ ಶೇಖರ್ ಚಂದ್ರ ಅವರದು. ತೆಲುಗಿನ ಅನಸೂಯ ಹಾಗೂ ಕನ್ನಡದ ಅನು ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶಕರು. ತೆಲುಗಿನ ಟ್ಯೂನ್‌ಗಳನ್ನು ಹಾಗೇ ಎತ್ತಿ ಇಳಿಸುತ್ತಾರೆಂದು ಬೇರೆ ಹೇಳಬೇಕಾಗಿಲ್ಲ. ಚಿತ್ರದಲ್ಲಿ ಎರಡು ಹಾಡುಗಳು ಮಾತ್ರ ಇವೆಯಂತೆ. ಅದರಲ್ಲಿ ಒಂದು ಐಟಂ ಸಾಂಗು! ಆ ಹಾಡಿಗೆ ಬಾಂಬೆಯಿಂದ ನೃತ್ಯಗಾರ್ತಿಯನ್ನು ಕರೆಸುವ ಆಲೋಚನೆಯೂ ಇದೆಯಂತೆ ನಿರ್ಮಾಪಕರ ತಲೆಯಲ್ಲಿ.
(ಕರ್ಟೆಸಿ : ದಟ್ಸ್‌ಕನ್ನಡ ಸಿನಿವಾರ್ತೆ)