Saturday, October 27, 2007

ಅವಸರ ತೋರದ ಬೆಂಗಳೂರು ಹುಡುಗಿ ಶರ್ಮಿಳಾ ಮಾಂಡ್ರೆ!




ಶರ್ಮಿಳಾ ಮಾಂಡ್ರೆ ನಿಧಾನವಾಗಿ, ಎಚ್ಚರಿಕೆಯಿಂದ ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಅವರಿಗೆ ಅವಸರವಿದ್ದಂತಿಲ್ಲ. ಪಾತ್ರಗಳ ಆಯ್ಕೆಯಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.
ವರ್ಷಕ್ಕೆ 10 ಅಥವಾ 15ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಠ ನನ್ನಲ್ಲಿಲ್ಲ. ವೈವಿಧ್ಯಮಯ ಪಾತ್ರಗಳನ್ನಷ್ಟೇ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಗ್ಲಾಮರ್ ಗರ್ಲ್ ಆಗಿ ನನ್ನ ಮೊದಲ ಚಿತ್ರ 'ಸಜನಿ'ಯಲ್ಲಿ ಮಿಂಚಿದ್ದಾಯಿತು. ಈಗ ಹಳ್ಳಿ ಹುಡುಗಿಯಾಗಿ 'ಕೃಷ್ಣ'ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮುಂದಿನ ಚಿತ್ರ ಯಾವುದು ಎಂಬುದು ನನಗೆ ಗೊತ್ತಿಲ್ಲ. ಸದ್ಯಕ್ಕೆ ಒಳ್ಳೆ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೇನೆ ಎನ್ನುತ್ತಾರೆ ಶರ್ಮಿಳಾ. ಈ ಹುಡುಗಿಯ ಎರಡನೇ ಸಿನಿಮಾ 'ಕೃಷ್ಣ'ಗೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಗಣೇಶ್ ಮತ್ತು ಪೂಜಾ ಗಾಂಧಿ ಮಧ್ಯೆಯೂ ಶರ್ಮಿಳಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.ತಮ್ಮ ಪಾತ್ರದ ಬಗ್ಗೆ ಅವರು ನಗುತ್ತಾ ಹೇಳಿದ್ದು ಹೀಗೆ; 'ಹಳ್ಳಿ ಹುಡುಗಿಯಾಗಿ ನಾನು ಕಾಣಿಸಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ನನಗೆ ಲಂಗ ದಾವಣಿ ಹಾಕಿಕೊಳ್ಳುವುದು ಹೇಗೆ ಎಂಬುದೇ ಗೊತ್ತಿರಲಿಲ್ಲ..' ನಾನು ಕನ್ನಡ ಚಿತ್ರದ ಮುಖಾಂತರ ಬಣ್ಣದ ಲೋಕಕ್ಕೆ ಕಾಲಿಟ್ಟೆ. ನಾನು ಬೆಂಗಳೂರು ಹುಡುಗಿಯಾಗಿರುವುದೇ ಇದಕ್ಕೆ ಕಾರಣ. ಹಾಗೆಂದು ಬೇರೆ ಭಾಷೆಯಲ್ಲಿ ಅಭಿನಯಿಸಲು ಇಷ್ಟವಿಲ್ಲ ಎಂದೇನಿಲ್ಲ. ತಮಿಳಿನಲ್ಲಿ ಭರತ್ ಜೊತೆ ಒಂದು ಚಿತ್ರ ಮತ್ತು ಭಾಗ್ಯರಾಜ್ ಪುತ್ರನ ಜೊತೆ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದೇನೆ ಎನ್ನುವ ಶರ್ಮಿಳಾಗೆ, ನಂ.1,ನಂ.2 ಎಂಬ ಗೇಮ್ ನಲ್ಲಿ ಆಸಕ್ತಿ ಇಲ್ಲವಂತೆ. 'ನಾನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಕೆಲಸ ಮಾಡ್ತೇನೆ. ನನ್ನ ಅಭಿಮಾನಿಗಳು ಇಷ್ಟಪಡುತ್ತಾರೆ'ಎನ್ನುವ ಶರ್ಮಿಳಾ ಕಣ್ಣಲ್ಲಿ ಬಣ್ಣದ ಕನಸುಗಳಿವೆ. ಆದರೆ ಆತುರವಿಲ್ಲ. ಶರ್ಮಿಳಾ ಮುಂದಿನ ಚಿತ್ರ 'ಈ ಬಂಧನ'. ಆದಿತ್ಯನಿಗೆ ನಾಯಕಿಯಾಗಿ ಈಕೆ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ಮತ್ತು ಜಯಪ್ರದಾ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ನಿರ್ದೇಶಕರು ವಿಜಯಲಕ್ಷ್ಮಿ ಸಿಂಗ್ . ಪತಿ ದೇವರು ಜೈಜಗದೀಶ್ 'ಮದನ' ನಿರ್ದೇಶಿಸಿ ಸುಸ್ತಾಗಿ ಕುಳಿತಾಗ, ವಿಜಯಲಕ್ಷ್ಮೀ ಆರಂಭಿಸಿದ್ದು;'ಈ ಬಂಧನ'.

No comments: